ಕೊಳ್ಳೇಗಾಲ: ಗೋಪಿನಾಥಂ ಬಳಿಯ ಹೋಗೆನ್ಕಲ್ ಜಲಪಾತ ರಸ್ತೆಯ ಇಕ್ಕೆಲೆಗಳ ಒತ್ತುವರಿ ಭೂಮಿಯಲ್ಲಿ ಸೋಮವಾರದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಎಸಿಎಫ್ ನಾಗರಾಜು ತಿಳಿಸಿದ್ದಾರೆ.
ತಾಲ್ಲೂಕಿನ ಗೋಪಿನಾಥಂ ಗ್ರಾಮದಿಂದ ಹೋಗೇನ್ಕಲ್ ಜಲಪಾತಕ್ಕೆ ಹೋಗುವ ರಸ್ತೆ ಬದಿಯಲ್ಲಿ ನೂರಾರು ಎಕರೆ ಅರಣ್ಯ ಜಮೀನನ್ನು ಜನರು ಕಾನೂನುಬಾಹಿರವಾಗಿ ಒತ್ತುವರಿ ಮಾಡಿಕೊಂಡು ಹಲವಾರು ವರ್ಷಗಳಿಂದ ಬೆಳೆಯನ್ನು ಬೆಳೆಯುತ್ತಿದ್ದರು. ಈ ಒತ್ತುವರಿಯನ್ನು ಕಾವೇರಿ ವನ್ಯಜೀವಿ ವಲಯದ ಎಸಿಎಫ್ ನಾಗರಾಜು, ಆರ್ಎಫ್ಒ ಸ್ವಾಮಿ ಮತ್ತು ಸಿಬ್ಬಂದಿ ತೆರವುಗೊಳಿಸಲು ಶುಕ್ರವಾರ ಮುಂದಾಗಿದ್ದರು.
ತೆರವು ಕಾರ್ಯಾಚರಣೆಗೆ ಈಚೆಗೆ ಬಂದ ಅಧಿಕಾರಿಗಳನ್ನು ಭೇಟಿ ಮಾಡಿದ ಗೋಪಿನಾಥಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಣಶೇಖರನ್, ಸದಸ್ಯ ಮುತ್ತು ಹಾಗೂ ರೇಖಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು.
`ಹಲವಾರು ವರ್ಷಗಳಿಂದ ಇಲ್ಲಿನ ರೈತರು ಜಮೀನುಮಾಡಿಕೊಂಡು ಸಾಕಷ್ಟು ಹಣ ಖರ್ಚುಮಾಡಿ ಬೆಳೆಬೆಳೆದು ಜೀವನ ನಡೆಸುತ್ತಿದ್ದಾರೆ. ತೆರವುಗೊಳಿಸಿದರೆ ಅವರು ಬೀದಿಪಾಲಾಗುವ ಸ್ಥಿತಿ ಇದೆ. ಕಾರ್ಯಾಚರಣೆಗೆ 2 ದಿನಗಳ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಅದಕ್ಕಾಗಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು.
ರೈತರು ಹಾಗೂ ಮುಖಂಡರು ಕೋರಿದ್ದ ಕಾಲಾವಕಾಶ ಮುಗಿದಿದೆ. ಸೋಮವಾರ ಒತ್ತವರಿ ತೆರವುಕಾರ್ಯಾಚರಣೆ ನಡೆಸಿ ಗುಂಡಿಗಳನ್ನು ತೆಗೆದು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.