ಕೃಷ್ಣರಾಜಪುರ: ‘ಕೆರೆ ಮತ್ತು ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿರುವ ಅಂಗಡಿ, ಮುಂಗಟ್ಟುಗಳ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು ಅವರನ್ನು ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ ದೇವರಾಜ್ ಶುಕ್ರವಾರ ತಿಳಿಸಿದರು.
ದೇವಸಂದ್ರ ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆ ಸದಸ್ಯೆ ಆರ್.ಮಂಜುಳಾದೇವಿ ಅವರ ಅನುದಾನದಿಂದ 2.45 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಹಾಗೂ ಚರಂಡಿ ಅಭಿವೃದ್ಧೊ ಕಾಮಗಾರಿ ಉದ್ಘಾಟಿಸಿ ಮಾತನಾಡಿದ ಅವರು, ಕೆರೆ ಪ್ರದೇಶದಲ್ಲಿ ಹಲವು ವರ್ಷಗಳಿಂದ ನೂರಾರು ಬಡ ಕುಟುಂಬಗಳು ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದುದರಿಂದ, ಓಡಾಡಲು ರಸ್ತೆ ಇಲ್ಲ ಎನ್ನುವ ನಿವಾಸಿಗಳ ದೂರಿಗೆ ಪ್ರತಿಕ್ರಿಯಿಸಿದ ಅವರು, ಪಾಲಿಕೆ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡು ಅವರನ್ನು ಅಲ್ಲಿಂದ ತೆರವುಗೊಳಿಸಲು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಮಹಿಳೆಯರ ಅಹವಾಲಿಗೆ ಪ್ರತಿಕ್ರಿಯಿಸಿದ ಶಾಸಕ ಎನ್.ಎಸ್.ನಂದೀಶ್ ರೆಡ್ಡಿ, ಮಳೆನೀರು ಸಂಗ್ರಹ ಯೋಜನೆ ಕಡ್ಡಾಯವಾಗಿದ್ದು ಇದನ್ನು ಅಳವಡಿಸಿಕೊಳ್ಳುವ ಮನೆ ಮಾಲೀಕರಿಗೆ ಸಹಾಯಧನ ನೀಡುವ ವಿಷಯ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಎತ್ತಂಗಡಿ ಇಲ್ಲ: ಕೆರೆ ಪ್ರದೇಶಗಳಲ್ಲಿ 4734 ಮಂದಿ ಬಡವರು 15-20 ವರ್ಷಗಳಿಂದ ವಾಸಿಸುತ್ತಿದ್ದಾರೆ.ಸರ್ಕಾರಿ ಜಾಗದಲ್ಲಿ ಅವರಿಗೆ ಮನೆ ನಿರ್ಮಿಸಿ ಕೊಟ್ಟ ನಂತರ ಅಲ್ಲಿಂದ ಸ್ಥಳಾಂತರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ವಾರ್ಡ್ನ ಬಿಬಿಎಂಪಿ ಸದಸ್ಯೆ ಆರ್.ಮಂಜುಳಾ ದೇವಿ, ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ್, ಸಹಾಯಕ ಎಂಜಿನಿಯರ್ ಕೃಷ್ಣರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕ ನಾರಾಯಣಸ್ವಾಮಿ, ಮುಖಂಡರಾದ ಸಿ.ಎನ್.ಶ್ರೀನಿವಾಸ್, ಕೇಶವಮೂರ್ತಿ, ತಾಯಪ್ಪ, ಲೋಕೇಶ್ ಬಾಬು, ಮಾರುತಿ , ಸನಾವುಲ್ಲಾ, ಪ್ರಕಾಶ್ ರೆಡ್ಡಿ ಇತರರು ಉಪಸ್ಥಿತರಿದ್ದರು.