ಬೆಂಗಳೂರು: ಇತರೆ ಹಿಂದುಳಿದ ಜಾತಿಗಳ (ಒಬಿಸಿ) ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ಗಳ ಪ್ರವೇಶಾತಿಯಲ್ಲಿ ಶೇಕಡ 27ರಷ್ಟು ಮೀಸಲಾತಿ ನೀಡುವ ಪ್ರಕ್ರಿಯೆ ಕೋಲ್ಕತ್ತದ `ಭಾರತೀಯ ನಿರ್ವಹಣಾ ಸಂಸ್ಥೆ~ಯಲ್ಲಿ (ಐಐಎಂಸಿ) ಪೂರ್ಣಗೊಂಡಿದೆ ಎಂದು ಸಂಸ್ಥೆಯ ನಿರ್ದೇಶಕ ಶೇಖರ ಚೌಧರಿ ತಿಳಿಸಿದರು.
`ಐಐಎಂಸಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ದೇಶದ ಇನ್ನಿತರ ನಿರ್ವಹಣಾ ಸಂಸ್ಥೆಗಳಲ್ಲೂ ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ ಅಥವಾ ಪೂರ್ಣಗೊಳ್ಳುವ ಹಂತದಲ್ಲಿದೆ~ ಎಂದು ಅವರು ತಿಳಿಸಿದರು.
ಐಐಎಂಸಿಯ ಹಳೆ ವಿದ್ಯಾರ್ಥಿಗಳ ಸಂಘದ ಬೆಂಗಳೂರು ಘಟಕ ಶನಿವಾರ ಇಲ್ಲಿ ಆಚರಿಸಿದ ಸಂಸ್ಥೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿವರ ನೀಡಿದರು. ರಾಷ್ಟ್ರದ ಉನ್ನತ ಶಿಕ್ಷಣ ಕೇಂದ್ರಗಳ (ಐಐಟಿ ಮತ್ತು ಐಐಎಂ) ಪ್ರವೇಶ ಪ್ರಕ್ರಿಯೆಯಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಶೇಕಡ 27ರಷ್ಟು ಮೀಸಲಾತಿ ನೀಡಬೇಕು ಎಂದು ಕೇಂದ್ರ ಸರ್ಕಾರ 2006ರಲ್ಲಿ ನಿಯಮ ರೂಪಿಸಿತ್ತು.
ಕೇಂದ್ರ ಸರ್ಕಾರದ ಈ ನಿಯಮವನ್ನು ಕೆಲವು ಸಂಘಟನೆಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಆದರೆ ಸುಪ್ರೀಂ ಕೋರ್ಟ್ 2008ರ ಏಪ್ರಿಲ್ 10ರಂದು ನೀಡಿದ್ದ ತೀರ್ಪಿನಲ್ಲಿ ಸರ್ಕಾರದ ನಿಯಮವನ್ನು ಎತ್ತಿಹಿಡಿದಿತ್ತು. ಐಐಎಂಸಿಯ ನಿರ್ದೇಶಕ ಅಜಿತ್ ಬಾಲಕೃಷ್ಣನ್, ಐಐಎಂಸಿ ಮುಖ್ಯಸ್ಥ ಪ್ರೊ. ಸೌಗತ ರೇ ಅವರು ಹಾಜರಿದ್ದರು.