ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಮರ್, ಮೆಹಬೂಬಾ ನಡುವೆ ವಾಕ್ಸಮರ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಶ್ರೀನಗರ (ಐಎಎನ್‌ಎಸ್): `ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಪಿಡಿಪಿಯ ಮೆಹಬೂಬಾ ಮುಫ್ತಿ ಅವರಂಥ ವಿರೋಧಿಗಳೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ~ ಎಂದು ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ನೀಡಿದ ಹೇಳಿಕೆ ಇದೀಗ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಹಾಗೂ ಪ್ರತಿಪಕ್ಷ ನಾಯಕಿ ಮೆಹಬೂಬಾ ಅವರ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ.

ಸೋಮವಾರ ಅಹಮದಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಮಂಡಳಿ (ಎನ್‌ಐಸಿ) ಸಭೆಯಲ್ಲಿ ಇಂತಹ ಹೇಳಿಕೆ ನೀಡಿದ್ದ ಸುಷ್ಮಾ, `ಇದು ನಿಜಕ್ಕೂ ಹೆಮ್ಮೆಯ ವಿಷಯ~ ಎಂದಿದ್ದರು.

ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಮೆಹಬೂಬಾ, `ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ನಾನು ಆ ರೀತಿ ಮಾತನಾಡಿಲ್ಲ. ಸರ್ಕಾರ ನಾನು ಮಾಡಿದ ಭಾಷಣದ ಪ್ರತಿಯನ್ನು ಬಿಡುಗಡೆ ಮಾಡಿದರೆ ಸತ್ಯ ಗೊತ್ತಾಗುತ್ತದೆ~ ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, `ತಾನು ಜಾತ್ಯತೀತ ಎನ್ನುವ ಸೋಗು ಹಾಕಲು ಬಿಜೆಪಿಗೆ  ಮುಸ್ಲಿಂ ನಾಯಕರ ಅಗತ್ಯ ಬಿದ್ದರೆ ಫಾರೂಖ್ ಅಬ್ದುಲ್ಲ ಅವರನ್ನು ಸಂಪರ್ಕಿಸಲಿ. ಫಾರೂಖ್ ಅವರಿಗೆ ಮೋದಿ ಎಂದರೆ ಅಚ್ಚುಮೆಚ್ಚು. ಮೋದಿ ಅವರ ಕಣ್ಣಲ್ಲಿ ಅಲ್ಲಾನನ್ನು ಕಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ~ ಎಂದು ವ್ಯಂಗ್ಯವಾಡಿದರು. ಒಮರ್ ಅಬ್ದುಲ್ಲ ಅವರತ್ತಲೂ ಮಾತಿನ ಬಾಣ ನೆಟ್ಟ ಅವರು, `ಗುಜರಾತ್ ನರಮೇಧದ ಸಂದರ್ಭದಲ್ಲಿ ಒಮರ್ ಎನ್‌ಡಿಎ ಸರ್ಕಾರದ ಸಚಿವರಾಗಿದ್ದರು~ ಎಂದು ತಿವಿದರು.

`ಮೆಹಬೂಬಾ ಅವರು ಮೋದಿಯನ್ನು ಹೊಗಳಿರುವುದರಲ್ಲಿ ಅಚ್ಚರಿಯೇನಿದೆ? ಅವರು ತಮಗಿಷ್ಟವಾದವರನ್ನು ಹೊಗಳಬಹುದು; ಆದರೆ  ಅವರು ಇದನ್ನು ನಿರಾಕರಿಸಿದ್ದು ನನಗೆ ಅಚ್ಚರಿಯಾಗಿದೆ~  ಎಂದು ಒಮರ್, ಮೆಹಬೂಬಾ ಅವರನ್ನು ಕೆಣಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT