ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಚರಂಡಿ-, ರಸ್ತೆ ಕಾಮಗಾರಿ ಚುರುಕುಗೊಳಿಸಿ’

Last Updated 18 ಡಿಸೆಂಬರ್ 2013, 5:50 IST
ಅಕ್ಷರ ಗಾತ್ರ

ಯಾದಗಿರಿ: ನಗರದಲ್ಲಿ ಉತ್ತರ ಕರ್ನಾ­ಟಕ ವಲಯ ಬಂಡವಾಳ ಅಭಿವೃದ್ಧಿ ಯೋಜನೆ ಮತ್ತು ಏಷಿಯನ್ ಬ್ಯಾಂಕ್ ನೆರವಿನಡಿ ನಡೆಯುತ್ತಿರುವ ಒಳ­ಚರಂಡಿ ಕಾಮಗಾರಿ, ನಗರೋತ್ಥಾನ ಯೋಜನೆಯಡಿ ವಿವಿಧ ಬಡಾವಣೆ­ಗಳಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ, ಕುಡಿಯುವ ನೀರಿನ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ್ ಮಂಗಳವಾರ ಪರಿಶೀಲಿಸಿದರು.

₨18.74 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರ ಒಳಚರಂಡಿ ಕಾಮಗಾರಿ ಪರಿಶೀಲನೆ ನಡೆಸಿದ ಅವರು, ಈ ಕಾಮಗಾರಿ­ಗಳನ್ನು 18 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕಾಗಿದ್ದು, ಈ ಕಾರ್ಯ­ವನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಸೌಲಭ್ಯ­ದಿಂದ ನಗರದ ಸುಮಾರು 13ಸಾವಿರ ಮನೆಗಳಿಗೆ ಅನುಕೂಲವಾಗಲಿದೆ. ಈ ಯೋಜನೆಯಿಂದ ಸುಮಾರು 76 ಸಾವಿರ ಜನರಿಗೆ ಸೌಲಭ್ಯ ಸಿಗಲಿದ್ದು, ನಗರದ ಸ್ವಚ್ಫತೆ ಹಾಗೂ ಸೌಂದರ್ಯಕ್ಕೆ  ಸಹಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

₨3.75 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಾಲಾಜಿ ಮಂದಿರದಿಂದ ಪದವಿ ಕಾಲೇಜು­ವರೆಗಿನ ರಸ್ತೆ ಕಾಮಗಾರಿಗಳನ್ನು ಬರುವ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ನಗರೋತ್ಥಾನ ಯೋಜನೆಯಡಿ ₨1.75 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಸಣ್ಣ ನೀರಾವರಿ ಇಲಾಖೆ ಕಚೇರಿಯಿಂದ ಹೊಸಳ್ಳಿ ಕ್ರಾಸ್‌ವರೆಗಿನ ರಸ್ತೆ ಕಾಮಗಾರಿ­ಯನ್ನು ಬರುವ ಮಾರ್ಚ್‌ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಈ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಮೆಟಲಿಂಗ್, ಕಲ್ವರ್ಟ್‌­ಗಳ ನಿರ್ಮಾಣ ಕಾರ್ಯ ಆಗಬೇಕಾಗಿದೆ. ಮಾರ್ಚ್‌ ಅಂತ್ಯ­ದೊಳಗೆ ಈ ಕಾಮಗಾರಿ ಪೂರ್ಣ­ಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ನಗರೋತ್ಥಾನ ಯೋಜನೆಯಡಿ ₨1.52 ಕೋಟಿ ವೆಚ್ಚದಲ್ಲಿ ಹೊಸಳ್ಳಿ ಕ್ರಾಸ್‌ನಿಂದ ಅಜೀಜ್‌ ಕಾಲೊನಿಯ­ವರೆಗಿನ ರಸ್ತೆ ಮತ್ತು ರಸ್ತೆ ಬದಿಯ ಚರಂಡಿ ಕಾಮಗಾರಿಯನ್ನು ಮುಂದಿನ ಜುಲೈ ತಿಂಗಳಲ್ಲಿ ಪೂರ್ಣಗೊಳಿಸ­ಬೇಕು. ನಗರದಲ್ಲಿ ₨12 ಕೋಟಿ ವೆಚ್ಚದಲ್ಲಿ ನಿರಂತರ ನೀರಿನ ಯೋಜನೆ­ಯಡಿ ಹೈ ಡೆನ್ಸಿಟಿ ಪಾವರ್ ಕೊಳವೆ ಅಳವಡಿಸುವ ಕಾರ್ಯ ಪ್ರಗತಿ­ಯಲ್ಲಿದ್ದು, ಅನುದಾನದ ಲಭ್ಯತೆ ಆಧಾರದ ಮೇಲೆ ಆದ್ಯತೆ ಮೇಲೆ ಈ ಕಾಮಗಾರಿ ಪೂರ್ಣಗೊಳಿಸಬೇಕು.  ನಗರದ ನೀರು ಶುದ್ಧೀಕರಣ ಘಟಕದ ಹತ್ತಿರದ ಉದ್ಯಾನದ ಗೇಟ್ ಅನ್ನು ಸಾರ್ವಜನಿಕರ ಅನುಕೂಲಕ್ಕೆ ತೆರೆದಿ­ಡಬೇಕು. ಸಾರ್ವಜನಿಕರಿಗೆ ತೊಂದರೆ­ಯಾಗದಂತೆ ಎಚ್ಚರವಹಿಸಿ ಅಧಿಕಾರಿ­ಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಎಫ್.ಆರ್.­ಜಮಾದಾರ್, ನಗರದಲ್ಲಿ ಒಳಚರಂಡಿ ಯೋಜನೆ, ನಗರೋತ್ಥಾನ ಯೋಜನೆ­ಯಡಿ ರಸ್ತೆ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳನ್ನು ತೀವ್ರ­ಗತಿಯಲ್ಲಿ ಕೈಗೊಳ್ಳಲಾಗುತ್ತಿದೆ. ಕುಷ್ಠರೋಗಿಗಳ ಕಾಲೊನಿಯಲ್ಲಿ ₨14 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸ­ಲಾಗಿದೆ. ನಗರದಲ್ಲಿ ಒಳ­ಚರಂಡಿ ಕಾಮಗಾರಿ ಪೂರ್ಣ­ಗೊಂಡಲ್ಲಿ ಸಂಪೂರ್ಣ ಸ್ವಚ್ಫತೆಗೂ ಸಹಕಾರಿಯಾಗಲಿದೆ. ಇತರೆ ಕಾಮಗಾರಿ­ಗಳನ್ನು ಕೂಡ ಆದ್ಯತೆ ಮೇಲೆ ಕೈಗೆತ್ತಿಕೊಂಡು ಪೂರ್ಣ­ಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಕೋಶ, ನಗರಸಭೆ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದು, ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT