ಈ ಕಾರಿಡಾರ್ಗಾಗಿ ರೈಲ್ವೆ ಇಲಾಖೆಯು ತನಗೆ ಸೇರಿದ 12,818 ಚದರ ಮೀಟರ್ ಜಾಗವನ್ನು ಸರ್ಕಾರಕ್ಕೆ ಹಸ್ತಾಂತರಿಸಿದೆ. ಅದಕ್ಕೆ ಬದಲಿಯಾಗಿ ಬೃಹತ್ ಬೆಂಗಳೂರು ನಗರ ಪಾಲಿಕೆಯ ವತಿಯಿಂದ ಬಿನ್ನಿ ಮಿಲ್, ಶೇಷಾದ್ರಿ ರಸ್ತೆ ಜಾಗಗಳಲ್ಲಿ ಈಗಾಗಲೇ ಸುಮಾರು ಎರಡು ಎಕರೆಯಷ್ಟು ಜಾಗವನ್ನು ನೀಡಲಾಗಿದೆ. ಉಳಿದ 3.16 ಎಕರೆ ಜಮೀನನ್ನು ಬಿನ್ನಿಮಿಲ್ ಜಾಗದಲ್ಲಿ ನೀಡಲಾಗುವುದು. ಖಾಸಗಿಯವರಿಗೆ ಸೇರಿದ 251 ಚದರ ಮೀಟರ್ ಜಾಗವನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ.
`ರೈಲ್ವೆ ಇಲಾಖೆ, ಬಿಬಿಎಂಪಿ, ಬಿಎಸ್ಎನ್ಎಲ್, ಬೆಂಗಳೂರು ಜಲಮಂಡಳಿ ಸೇರಿದಂತೆ ಅನೇಕ ಇಲಾಖೆಗಳೊಂದಿಗೆ ಕಳೆದ ನಾಲ್ಕು ವರ್ಷಗಳ ಸತತ ಸಭೆಗಳು, ಪರಾಮರ್ಶೆಗಳ ನಂತರ ನನ್ನ ಬಹುದಿನಗಳ ಕನಸಿನ ಈ ಯೋಜನೆಗೆ ಅಂತಿಮ ರೂಪ ದೊರಕಿದೆ' ಎಂದು ರಾಜಾಜಿನಗರ ಕ್ಷೇತ್ರದ ಶಾಸಕರೂ ಆದ ಸಚಿವ ಎಸ್.ಸುರೇಶ್ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.
`2014ರ ಜೂನ್ ಒಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲಿಯವರೆಗೆ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಸಹಕಾರ ನೀಡಬೇಕು' ಎಂದು ಅವರು ಕೋರಿದ್ದಾರೆ.