ಸಿರುಗುಪ್ಪ: ತಾಲ್ಲೂಕಿನ ಕೆಂಚನಗುಡ್ಡದ ಶ್ರೀ ವಸುಧೇಂದ್ರ ತೀರ್ಥ ಶ್ರಿಪಾದಂಗಳ 250ನೇ ಆರಾಧನೆಯ ಕೊನೆಯ ದಿನವಾದ ಶುಕ್ರವಾರ ರಾಯರ ಭಕ್ತರು ಬಣ್ಣದ ಓಕುಳಿ ಎರೆಚಿಕೊಂಡು ಸಂಭ್ರಮಿಸಿ ನದಿಯಲ್ಲಿ ಆವೃತ್ತ ಸ್ನಾನ ಮಾಡಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಇಂದು ಬೆಳಿಗ್ಗೆ ವಸುಧೇಂದ್ರತೀರ್ಥರ ಶ್ರಿಪಾದಂಗಳ ಮೂಲ ಬೃಂದಾವನಕ್ಕೆ ಪ್ರಾತಃಕಾಲದ ಪೂಜಾ ಆರಾಧನೆಗಳು ಜರುಗಿ ನಂತರ ರಜತ ಮತ್ತು ರೇಷ್ಮೆ ಅಲಂಕಾರಗಳಿಂದ ಶೃಂಗರಿಸಲಾಗಿತ್ತು. ನಿರ್ಮಲ ವಿಸರ್ಜನೆ ಜೊತೆಗೆ ನದಿಯಲ್ಲಿ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಗಂಗಾಸ್ನಾನ ಮಾಡಿಸಿ ಧಾರ್ಮಿಕ ವಿಶೇಷ ಪೂಜೆಗಳನ್ನು ಗೈದು ಮೆರವಣಿಗೆ ನಡೆಸಿದರು.
ನಂತರ ವಸುಧೇಂದ್ರತೀರ್ಥರ ಜೀವನಚರಿತ್ರೆ ಬಗ್ಗೆ ವಿದ್ವಾಂಸರಾದ ವ್ಯಾಸರಾಜಾಚಾರ್ಯ, ವಾದಿರಾಜಾ ಚಾರ್ಯ, ಕೃಷ್ಣಚಾರ್ಯ ಉಪನ್ಯಾಸ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊಸಪೇಟೆಯ ಸಂಧ್ಯಾ ಭರತನಾಟ್ಯ ಪ್ರದರ್ಶನ ನೀಡಿದರು.
ಕಾರ್ತಿಕ ಮಾಸದ ಪರ್ಯಂತ ತುಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಗಂಗಾ ಜಲದಲ್ಲಿ ಮಿಂದರೆ ಎಷ್ಟು ಪವಿತ್ರವೋ ಅಷ್ಟೇ ಪುಣ್ಯ ಲಭಿಸುತ್ತದೆ ಎಂದು ಆವೃತ್ತ ಸ್ನಾನದ ಸಂದೇಶವನ್ನು ಬಳ್ಳಾರಿ ರಾಯರ ಮಠದ ಧರ್ಮಾಧಿಕಾರಿ ಬ್ರಹ್ಮಣ್ಯಾಚಾರ್ಯ ಉಪದೇಶ ನೀಡಿದರು.
ಮಂತ್ರಾಲಯ ಶ್ರೀಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ರಾಜಾ.ಎಸ್. ಸುಯಮೀಂದ್ರಾಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಕೆಂಚನಗುಡ್ಡ ಮಠದ ವ್ಯವಸ್ಥಾಪಕ ವತ್ಸಲಾಚಾರ್ಯ, ವಿಚಾರಣಾಕರ್ತ ವೆಂಕಟೇಶಚಾರ್ಯ, ಅರ್ಚಕ ಶ್ರೀರಂಗಾಚಾರ್ಯ, ಎ.ಜೆ. ಸಂಜಯಾಚಾರ್ಯ, ಗುಂಡಾ ಚಾರ್ಯರು ಉಪಸ್ಥಿತರಿದ್ದರು.
ಇಂದು ಸಂಜೆ ಮಹಾಮಂಗಳಾರತಿ ಯೊಂದಿಗೆ ಪಂಚ ರಾತ್ರೋತ್ಸವದ ಆರಾಧನೆ ಅಂತ್ಯಗೊಂಡಿತು.