ಕೊಟ್ಟೂರು: ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗು ತ್ತಿರುವುದು ಹೊಸ ಬೆಳವಣಿಗೆ. ಯಾವುದೇ ಶಾಲೆ ಕಾಲೇಜುಗೆ ಹೋದರೂ ವಿದ್ಯಾರ್ಥಿನಿಯರೇ ಹೆಚ್ಚಿರುತ್ತದೆ ಎಂದು ಸಾಹಿತಿ ಡಾ. ನಾ. ಲೋಕೇಶ್ ಒಡೆಯರ್ ಅಭಿಪ್ರಾಯಪಟ್ಟರು.
ಸಮೀಪದ ತೂಲಹಳ್ಳಿಯ ಶ್ರೀ ತರಳಬಾಳು ಸಿದ್ದೇಶ್ವರ ಪ್ರೌಢಶಾಲೆ ಯಲ್ಲಿ ಕೊಟ್ಟೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ತೂಲಹಳ್ಳಿ ಎಸ್. ಸಿದ್ದಮ್ಮ ಮತ್ತು ನಿಂಗಪ್ಪ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕ್ರಾಂತಿ ಯೋಗಿ ವಿಶ್ವಬಂಧು ಮರುಳಸಿದ್ಧ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಹೆಣ್ಣೊಂದು ಕಲಿತರೆ ಶಾಲೆ ಯೊಂದು ತೆರೆದಂತೆ ಎಂಬ ನುಡಿ ಹೆಣ್ಣು ಮಕ್ಕಳು ಹೆಚ್ಚು ವ್ಯಾಸಂಗ ಮಾಡುತ್ತಿ ರುವುದರಿಂದ ಈ ನಾಣ್ನುಡಿ ಸತ್ಯವಾಗ ತೊಡಗಿದೆ ಎಂದರು.
ಶತ ಶತಮಾನಗಳಿಂದಲೂ ಪುರೋ ಹಿತಶಾಹಿಗಳು ಮೌಢ್ಯತೆ ಯನ್ನು ಸಮಾಜದಲ್ಲಿ ಬಿತ್ತುತ್ತಾ ಬಂದಿದ್ದಾರೆ. ಇದರ ಫಲವೇ ಮಡೆಸ್ನಾನ. ಇಂದಿನ ಆಧುನಿಕ ಯುಗದಲ್ಲಿ ಮಡೆಸ್ನಾನ ಮೌಢ್ಯತೆಯ ಪರಮಾವಧಿ ಎಂದರು.
12ನೇ ಶತಮಾನದಲ್ಲಿ ಮೌಢ್ಯತೆ, ಮೂಢನಂಬಿಕೆ, ಬಲಿದಾನಗಳ ವಿರುದ್ಧ ವಿಶ್ವಬಂಧು ಮರುಳಸಿದ್ಧರು ಏಕಾಂಗಿ ಯಾಗಿ ಹೋರಾಡಿ ಜನರಲ್ಲಿ ಅರಿವು ಮೂಡಿಸಿದ್ದರು. ಈ ಹೋರಾಟದ ಫಲವಾಗಿ ಮರುಳಸಿದ್ಧರು ಕ್ರಾಂತಿ ಯೋಗಿಯಾಗಿ ಭಕ್ತರ ಮನಸಿನಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ ಎಂದರು.
ತೆಲಗುಬಾಳು ಗುರುಪರಂಪರೆ ಇಂದಿಗೂ ಮುಂದುವರಿದಿದ್ದು, ಗ್ರಾಮೀಣ ಪ್ರದೇಶದಲ್ಲಿ ಶ್ರೀಗಳು ಆರಂಭಿಸಿದ ಶಿಕ್ಷಣ ದಾಸೋಹ ದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ ಎಂದರು.
ದಾವಣಗೆರೆ ಉದ್ಯಮಿ ಮಳಲ್ಕರೆ ಮಹೇಶ್ವರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಮುಖ್ಯ ಗುರುಗಳಾದ ಟಿ.ಎಂ. ಶಕುಂತಲಾ ವಿದ್ಯಾರ್ಥಿಗಳಿಗೆ ರತ್ನಕೋಶ ಪುಸ್ತಕ ವಿತರಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ದತ್ತಿದಾನಿ ಎಸ್. ಹೇಮಣ್ಣ ಮಾತನಾಡಿ, `ನನ್ನ ಜೀವನ ಇರುವ ತನಕ ಈ ಶಾಲೆಯ ವಿದ್ಯಾರ್ಥಿ ಗಳಿಗೆ ಪ್ರತಿವರ್ಷ ಉಚಿತವಾಗಿ ರತ್ನಕೋಶ ಪುಸ್ತಕಗಳನ್ನು ಉಚಿತವಾಗಿ ವಿತರಿಸುವುದಾಗಿ~ ಹೇಳಿದರು.
ಕೊಟ್ಟೂರು ಹೋಬಳಿ ಘಟಕದ ಕ.ಸಾ.ಪ. ಅಧ್ಯಕ್ಷ ಡಾ. ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲೆಯ ಮುಖ್ಯಗುರುಗಳಾದ ಶಾಂತಕುಮಾರ ಸ್ವಾಗತಿಸಿದರು. ಸ್ನೇಹ, ಶ್ವೇತಾ, ಆಶಾ ಪ್ರಾರ್ಥಿಸಿದರು. ನಾಗರಾಜ್ ಸಿರಿಗೆರೆ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.