ಸೋಮವಾರಪೇಟೆ: ಓದುಗರ ಚಿಂತನೆ ಮತ್ತು ಕ್ರಿಯಾಶೀಲತೆಯನ್ನು ಪತ್ರಿಕೆಗಳು ಹೆಚ್ಚಿಸುತ್ತವೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ತೇಲಪಂಡ ಕವನ್ಕಾರ್ಯಪ್ಪ ಅಭಿಪ್ರಾಯಪಟ್ಟರು.
ಸಮೀಪದ ಮಸಗೋಡು ಮಹಿಳಾ ಸಮಾಜದ ಆವರಣದಲ್ಲಿ ನಡೆಯುತ್ತಿರುವ ಆಲೂರು ಸಿದ್ದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ ಪಾಲ್ಗೊಂಡು ಆಧುನಿಕ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಮತ್ತು ವಿದ್ಯಾರ್ಥಿಗಳ ಜವಾಬ್ದಾರಿ ಎಂಬ ವಿಷಯದಲ್ಲಿ ಮಂಗಳವಾರ ಉಪನ್ಯಾಸ ನೀಡಿದರು. ಪತ್ರಿಕೆಗಳೊಂದಿಗೆ ಬಾನುಲಿ, ದೂರದರ್ಶನ ಮತ್ತು ಚಲನಚಿತ್ರವೂ ಕೂಡ ಅತ್ಯುತ್ತಮ ಸಮೂಹ ಮಾಧ್ಯಮಗಳೆಂದು ಸಮಾಜದಲ್ಲಿ ಪರಿಗಣಿಸಲ್ಪಟ್ಟಿದೆ ಎಂದರು.
ಅಸಹಾಯಕತೆ ಹಾದಿಯಲ್ಲಿ ನಾವು ನೀವು ಎಂಬ ವಿಚಾರದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಿ.ಕೆ.ಚಂದ್ರಶೇಖರ್ ಉಪನ್ಯಾಸ ನೀಡಿದರು.
ಆಲೂರು ಸಿದ್ದಾಪುರ ಕಾಲೇಜು ಅಭಿವೃದ್ಧಿ ಸಮೀತಿ ಸದಸ್ಯೆ ಮೀನಾಕ್ಷಿ ಅಧ್ಯಕ್ಷತೆ ವಹಿಸಿದರು. ಶಿಬಿರಾಧಿಕಾರಿಗಳಾದ ಎಚ್.ಪಿ.ಶಿವಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕನಕ ಸ್ವಾಗತಿಸಿದರು. ಕೆ.ಆರ್.ಪೇಟೆ ಅಕ್ಬರ್ ತಂಡದವರಿಂದ ಜಾದು ಪ್ರದರ್ಶನ ನಡೆಯಿತು.