ಹಾವೇರಿ: ಮಾಜಿ ಶಾಸಕ ನೆಹರೂ ಓಲೇಕಾರ ಹಾಗೂ ಅವರ ಇಬ್ಬರ ಪುತ್ರರ ಬಂಧನ ಮಾಡದ ಲೋಕಾಯುಕ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯ ಪುನಃ ಬಂಧನ ಆದೇಶವನ್ನು ಲೋಕಾಯುಕ್ತ ಹೆಚ್ವುವರಿ ಪೊಲೀಸ್ ಮಹಾನಿರ್ದೇಶಕರಿಗೆ (ಎಡಿಜಿಪಿ) ಶುಕ್ರವಾರ ಜಾರಿಗೊಳಿಸಿದೆ.
ಲೋಕಾಯುಕ್ತ ವಿಶೇಷ ನ್ಯಾಯಾಲಯವು ಇದೇ 16ರಂದು ಮಾಜಿ ಶಾಸಕ ನೆಹರೂ ಓಲೇಕಾರ, ಅವರ ಮಕ್ಕಳಾದ ಮಂಜುನಾಥ ಹಾಗೂ ದೇವರಾಜ ಅವರನ್ನು ಬಂಧಿಸಲು ಆದೇಶ ಹೊರಡಿಸಿತ್ತಲ್ಲದೇ, ಅಧಿಕಾರಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಲು ಸೂಚಿಸಿ, ವಿಚಾರಣೆ ಮುಂದೂಡಿತ್ತು.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು, ಓಲೇಕಾರ ಹಾಗೂ ಅವರ ಪುತ್ರರನ್ನು ಬಂಧಿಸಲು ನಡೆಸಿದ ಪ್ರಯತ್ನಗಳು ವಿಫಲವಾಗಿವೆ. ಅವರು ಊರಲ್ಲಿ ಇಲ್ಲ. ಬೇರೆ ಕಡೆ ಹುಡುಕಿದರೂ ಸಿಕ್ಕಿಲ್ಲ. ಅವರ ಬಂಧನಕ್ಕೆ ಇನ್ನಷ್ಟು ಕಾಲಾವಕಾಶ ನೀಡುವಂತೆ ನ್ಯಾಯಾಧೀಶರಲ್ಲಿ ಲಿಖಿತ ಮನವಿ ಮಾಡಿದರು.