ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲೈಕೆ ಕಸರತ್ತಿನ ಮೇಲೆ ನಿಗಾ

Last Updated 12 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಕೊಪ್ಪಳ: ಚುನಾವಣಾ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದರ ಮೇಲೆ ನಿಗಾ ಇಡಲು ಮೊದಲ ಬಾರಿಗೆ ವಿಡಿಯೊ ಚಿತ್ರೀಕರಣ ಹಾಗೂ ಪರಿಶೀಲನೆಗಾಗಿ ವಿಶೇಷ ತಂಡ ರಚನೆಯಾಗಿದ್ದು ಅಂಥ ವ್ಯವಸ್ಥೆಗೆ ಈ ಉಪಚುನಾವಣೆ ಸಾಕ್ಷಿಯಾಗಿದೆ.

ಸಾರ್ವತ್ರಿಕ ಅಥವಾ ಉಪಚುನಾವಣೆ ವೇಳೆ ಮಾದರಿ ನೀತಿಸಂಹಿತೆ ಉಲ್ಲಂಘನೆಯ ಮೆಲೆ ನಿಗಾ ಇಡಲು ಹಾಗೂ ಮದ್ಯ- ಹಣ ಹಂಚಿಕೆಯನ್ನು ಪರಿಶೀಲಿಸಲು ತಂಡಗಳನ್ನು ರಚಿಸುವುದು ಸಾಮಾನ್ಯ. ಇದೇ ಮೊದಲ ಬಾರಿಗೆ ಈ ಉಪಚುನಾವಣೆ ಸಂದರ್ಭದಲ್ಲಿ ಉಮೇದುವಾರರು ಹಾಗೂ ಅವರ ಬೆಂಬಲಿಗರ ಪ್ರತಿಯೊಂದು  ಚಲನವಲನದ ಮೇಲೆ ನಿಗಾ ಇಡುವ ಸಲುವಾಗಿ ~ವಿಡಿಯೋ ಸಮೀಕ್ಷಾ ತಂಡ~ಗಳನ್ನು ರಚಿಸಿರುವುದು ರಾಜಕೀಯ ಪಕ್ಷಗಳಿಗೆ ನುಂಗಲಾರದ ತುಪ್ಪವಾಗಿದೆ.

~ಸರ, ಭಾಳ ತ್ರಾಸ ಆಗೈತ್ರಿ. ನಾವ್ ಎಲ್ಲಿ ಹೋಗ್ತೀವಿ ಅಲ್ಲೆಲ್ಲಾ ಈ ತಂಡದವ್ರ ಶೂಟಿಂಗ್ ಮಾಡಾಕ ಬರ್ತಾರ‌್ರಿ~ ಎಂಬುದು ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರ ದೂರು. ಹೆಸರನ್ನು ಬಹಿರಂಗಪಡಿಸಲು ಬಯಸದೇ ~ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಪಕ್ಷಗಳ ಕಾರ್ಯಕರ್ತರು, ಈ ಸಲ ಎಲೆಕ್ಷನ್ ಭಾಳಾ ಸ್ಟ್ರಿಕ್ಟ್ ಮಾಡ್ಯಾರ‌್ರಿ. ನಮಗ ಏನ್ ಮಾಡ್‌ಬೇಕು ಅಂತನ ಗೊತ್ತಾಗ್ತಿಲ್ರಿ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಇಬ್ಬರು ಸಿಬ್ಬಂದಿ ಹೊಂದಿರುವ ಐದು ~ವಿಡಿಯೋ ಸಮೀಕ್ಷಾ ತಂಡ~ಗಳನ್ನು ರಚಿಸಲಾಗಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಈ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸುವಾಗ ಈ ತಂಡಗಳು ಅವರನ್ನು ಹಿಂಬಾಲಿಸಲಿವೆ. ಅವರ ಪ್ರತಿ ಕಾರ್ಯಕ್ರಮ, ಯಾರನ್ನು ಭೇಟಿ ಮಾಡುತ್ತಾರೆ, ಜನರ ಬಳಿ ಮತ ಯಾಚನೆ ಮಾಡುವಾಗ ಏನು ಆಶ್ವಾಸನೆ, ಆಮಿಷ ಒಡ್ಡುತ್ತಾರೆ ಎಂಬುದನ್ನು ಸಮಗ್ರವಾಗಿ ಚಿತ್ರೀಕರಿಸಲಾಗುತ್ತದೆ ಎಂದು ಚುನಾವಣಾಧಿಕಾರಿ ಎಂ.ಶರಣಬಸಪ್ಪ ವಿವರಿಸುತ್ತಾರೆ.

ಈ ರೀತಿ ಚಿತ್ರೀಕರಿಸಿದ ಸಿ.ಡಿ.ಯನ್ನು ಪರಿಶೀಲಿಸಲು ಐದು ಜನ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡವನ್ನೂ ಮೊದಲ ಬಾರಿಗೆ ರಚಿಸಲಾಗಿದೆ. ಪ್ರಚಾರದ ಯಾವ ಹಂತದಲ್ಲಿ ಚುನಾವಣೆಯ ಮಾದರಿ ನೀತಿಸಂಹಿತೆಯ ಉಲ್ಲಂಘನೆ ನಡೆದಿದೆ ಎಂಬುದನ್ನು ಈ ತಂಡ ಪರಿಶೀಲಿಸಿ, ವೀಕ್ಷಕರ ಗಮನಕ್ಕೆ ತರಲಿದೆ ಎಂದೂ ಅವರು ವಿವರಿಸುತ್ತಾರೆ.

ಇದರ ಜೊತೆಗೆ, ಮೊದಲ ಬಾರಿ ಸಂಚಾರಿ ತಂಡಗಳನ್ನೂ ರಚಿಸಲಾಗಿದೆ. ಜಿಲ್ಲೆಯಲ್ಲಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಈ ತಂಡದ ನೇತೃತ್ವ ವಹಿಸಲಾಗಿದೆ. ಪ್ರತಿ ಪಿಡಿಒ ಜೊತೆಗೆ ಒಬ್ಬ ಗನ್‌ಮ್ಯಾನ್ ಇರುತ್ತಾನೆ.

ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಈ ಸಂಚಾರಿ ತಂಡಗಳು ಪರಿಶೀಲಿಸಿ, ವರದಿ ನೀಡಲಿವೆ ಎಂದು ತಿಳಿಸುತ್ತಾರೆ.

ಇದಲ್ಲದೇ, ಪ್ರತಿ ಚುನಾವಣೆಯಲ್ಲಿ ಇರುವಂತೆ, ಜಿಲ್ಲೆಯಲ್ಲಿ 8 ಅಬಕಾರಿ ಚೆಕ್‌ಪೋಸ್ಟ್‌ಗಳು, ಮಾದರಿ ನೀತಿಸಂಹಿತೆ ಜಾರಿಯಾಗಿರುವ ಬಗ್ಗೆ ಪರಿಶೀಲಿಸಲು ಒಟ್ಟು 8 ಉಸ್ತುವಾರಿ ತಂಡಗಳನ್ನೂ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT