ಓವರ್ಲೋಡ್ ತಡೆಗಟ್ಟಲು ಸಾರಿಗೆ, ಪೊಲೀಸ್ ಅಧಿಕಾರಿಗಳಿಗೆ ಕೆಲ ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕಾಗಿದೆ. ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು. ಸ್ಪಂದಿಸದೇ ಇದ್ದರೆ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಲಾರಿ ಮಾಲೀಕರ ಸಂಘದಿಂದ ಧರಣಿ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಸಯ್ಯದ್ ಮುಕ್ರಮ್ ಹೇಳಿದರು. ನಮ್ಮ ಲಾರಿಗಳು ಹೆಚ್ಚು ಬಾಳಿಕೆ ಬರಬೇಕು. ಸರ್ಕಾರದ ನಿರ್ದಿಷ್ಟ ಪಡಿಸಿದ ಮತ್ತು ಒಂದು ಲಾರಿ ಎಷ್ಟು ಭಾರ ಹೊರಲು ಸೂಕ್ತ ಎಂದು ತಾಂತ್ರಿಕ ಶಿಫಾರಸು ಇರುತ್ತದೆಯೋ ಆ ಪ್ರಮಾಣದ ಸರಕು ಸಾಗಿಸಬೇಕು. ಲಾರಿ ಮಾಲೀಕರ ಸಂಘದ ಬೇಡಿಕೆಯೂ ಇದೇ ಆಗಿದೆ. ಆದರೆ ಅಕ್ಕಿ ಗಿರಣಿ ಸೇರಿದಂತೆ ಕೆಲ ಕೈಗಾರಿಕೆಗಳ ಮಾಲೀಕರು ಓವರ್ಲೋಡ್ಗೆ ಒತ್ತಡ ಹೇರುತ್ತಾರೆ. ಒತ್ತಡಕ್ಕೆ ಸಿಲುಕಿ ಓವರ್ಲೋಡ್ ಮಾಡಿದರೆ ಅಪಘಾತ, ನಿರ್ದಿಷ್ಟ ಸಮಯದಲ್ಲಿ ತಲುಪುವಲ್ಲಿ ವಿಳಂಬ, ಟಯರ್ ಸಿಡಿತದಂಥ ಸಮಸ್ಯೆ ಆಗಿ ಅಪಾಯ ಆಗುತ್ತದೆ. ಹೀಗಾಗಿ ಕೂಡಲೇ ಈ ಸಮಸ್ಯೆ ಹೋಗಲಾಡಿಸಬೇಕು ಎಂದು ಮನವಿ ಮಾಡಿದರು.