ಔರಾದ್: ಮೇ 5ರಂದು ನಡೆಯುವ ಇಲ್ಲಿಯ ಮೀಸಲು ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಶುಕ್ರವಾರ ಮತಗಟ್ಟೆ ಅಧಿಕಾರಿಗಳಿಗೆ ಪ್ರಥಮ ಹಂತದ ತರಬೇತಿ ನೀಡಲಾಯಿತು.
ಕಳೆದ 10ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಶುಕ್ರವಾರ ಒಟ್ಟು ಮೂರು ನಾಮಪತ್ರಗಳು ದಾಖಲಿಸಿದ್ದಾರೆ. ಶಾಮಣ್ಣ ಚಂದ್ರಪ್ಪ ಬಾವಗಿ, ಡಾ. ಶಂಕರರಾವ ಸೋನಾಳವಾಡಿ ಕಮಲನಗರ, ರತನಸಿಂಗ ವಿಜಯನಗರ ತಾಂಡಾ ಅವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಹಸೀಲ್ದಾರ್ ವೆಂಕಣ್ಣ ತಿಳಿಸಿದ್ದಾರೆ.
ಬಿಜೆಪಿಯ ಶಾಸಕ ಪ್ರಭು ಚವ್ಹಾಣ್ 15ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್-ಕೆಜೆಪಿ ಮತ್ತು ಜೆಡಿಎಸ್ ಇನ್ನು ತನಕ ಅಧಿಕೃತ ಅಭ್ಯರ್ಥಿ ಘೋಷಣೆಯಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ನಂತರವೇ ಕೆಜೆಪಿಯವರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಗೊತ್ತಾಗಿದೆ.
ತರಬೇತಿ: ಇಲ್ಲಿಯ ಅಮರೇಶ್ವರ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಮತಗಟ್ಟೆ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಪ್ರಥಮ ಹಂತದ ತರಬೇತಿ ನೀಡಲಾಯಿತು.
327 ಮತಗಟ್ಟೆ ಮತ್ತು 371 ಸಹಾಯಕ ಮತಗಟ್ಟೆ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಂಡು ಚುನಾವಣೆ ನಡೆಸುವ ಕುರಿತು ಮಾಹಿತಿ ಪಡೆದುಕೊಂಡರು. ಎಂ.ಎಸ್. ಕಟಗಿ ಮತ್ತು ಎಸ್.ಎನ್. ಶಿವಣಕರ್ ಅವರು, ಅಣಕು ಮತದಾನ, ಟೆಂಡರ್ ಮತಪತ್ರ ಸೇರಿದಂತೆ ಚುನಾವಣೆ ಸಂಬಂಧ ಸಮಗ್ರ ಮಾಹಿತಿ ನೀಡಿದರು. ಮತ್ತೊಂದೆಡೆ ಮತಯಂತ್ರದ ಪ್ರಾತ್ಯಕ್ಷಿಕೆ ತೋರಿಸಲಾಯಿತು.
ಪಥ ಸಂಚಲನ: ಚುನಾವಣೆ ಹಿನ್ನೆಲೆಯಲ್ಲಿ ಸೇನಾ ಪಡೆ ಯೋಧರು ಮತ್ತು ಪೊಲೀಸರು ಶುಕ್ರವಾರ ಪಟ್ಟಣದಲ್ಲಿ ಜಂಟಿ ಪಥ ಸಂಚಲನ ನಡೆಸಿದರು. ನಾವು ನಿಮ್ಮಂದಿಗೆ ಇದ್ದೇವೆ. ನೀವು ನಿಮ್ಮ ಹಕ್ಕು ನಿರ್ಭಯವಾಗಿ ಚಲಾಯಿಸಿರಿ ಎಂದು ಸೇನಾ ಪಡೆ ಯೋಧರು ಪಥಸಂಚಲನ ಮೂಲಕ ಮತದಾರರಲ್ಲಿ ಜಾಗೃತಿ ಮತ್ತು ಧೈರ್ಯ ಮೂಡಿಸಿದರು. ಸರ್ಕಲ್ ಇನ್ಸ್ಪೆಕ್ಟರ್ ಎನ್.ಬಿ. ಮಠಪತಿ, ಪಿಎಸ್ಐ ಜಗನ್ನಾಥ, ಶ್ರೀಕಾಂತ ಅಲ್ಲಾಪುರ ಹಾಗೂ ಸ್ಥಳೀಯ ಪೊಲೀಸರು ಪಥ ಸಂಚಲನಕ್ಕೆ ಸಾಥ ನೀಡಿದರು.