ಔರಾದ್: ಮುಂಗಾರು ಮತ್ತು ಹಿಂಗಾರು ಬೆಳೆ ಹಾನಿ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಅಧ್ಯಕ್ಷ ವಿಶ್ವನಾಥ ಪಾಟೀಲ, ಸತ್ಯವಾನ ಪಾಟೀಲ, ಶ್ರೀಮಂತ ಬಿರಾದಾರ, ಪ್ರಕಾಶ ಬಾವುಗೆ, ಗೋವಿಂದ ಇಂಗಳೆ ನೇತೃತ್ವದಲ್ಲಿ ಬ್ರಹತ್ ಪ್ರದರ್ಶನ ನಡೆಸಿದರು.
ಮಳೆಯಾಶ್ರಿತ ಪ್ರದೇಶವಾದ ತಾಲ್ಲೂಕಿನಲ್ಲಿ ಈ ವರ್ಷ ಮಳೆ ಇಲ್ಲದೆ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಪ್ರಮುಖ ಬೆಳೆಯಾದ ಉದ್ದು, ಸೋಯಾ, ತೊಗರಿ ಬೆಳೆ ಕೈಕೊಟ್ಟ ಪರಿಣಾಮ ರೈತರು ಆತಂಕದಲ್ಲಿದ್ದಾರೆ.
ಒಂದೆಡೆ ಸಾಲಗಾರರ ಕಾಟ ಮತ್ತೊಂದೆಡೆ ಕುಟುಂಬ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡ ರೈತ ಅನಿವಾರ್ಯವಾಗಿ ಪಟ್ಟಣಗಳಿಗೆ ವಲಸೆ ಹೋಗುವಂತಾಗಿದೆ ಎಂದು ರೈತ ಮುಖಂಡರು ಅಲವತ್ತುಕೊಂಡರು.
ಕೇವಲ ಬರ ಘೋಷಣೆ ಮಾಡಿದರೆ ಸಾಲದು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು.
ಸಣ್ಣ ಮತ್ತು ದೊಡ್ಡ ರೈತರೆಂದು ತಾರತಮ್ಯ ಮಾಡದೆ ಎಲ್ಲ ರೈತರಿಗೆ ಎಕರೆಗೆ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಸಾಲ ಮನ್ನಾ ಮಾಡಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೀಜ ಮತ್ತು ಗೊಬ್ಬರ ಶೇ. 75 ರಿಯಾಯ್ತಿಯಲ್ಲಿ ಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಮಂಡಿಸಿದರು. ಬೇಡಿಕೆ ಕುರಿತು ಮನವಿಪತ್ರ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಅಮರೇಶ್ವರ ಮಂದಿರದಿಂದ ಮಿನಿ ವಿಧಾನಸೌಧ ವರೆಗೆ ನಡೆದ ರ್ಯಾಲಿಯಲ್ಲಿ ಕಲ್ಲಪ್ಪ ದೇಶಮುಖ, ಬಾಬುರಾವ ವನಮಾರಪಳ್ಳಿ, ಪ್ರಭುದಾಸ ಸಂತಪುರ, ಗುಂಡಪ್ಪ ಬಿರಾದಾರ, ರಾಜೇಂದ್ರ ಮಾಳಿ, ಸಂತೋಷ ಜಂಬಗಿ, ಶರಣಪ್ಪ ಜೋಜನಾ, ವೈಜಿನಾಥ ನಿಟ್ಟೂರೆ ಸೇರಿದಂತೆ ಅಪಾರ ಸಂಖ್ಯೆ ರೈತರು ಪಾಲ್ಗೊಂಡರು.