ದಾವಣಗೆರೆ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಕಂಚಿಕೆರೆ ಗ್ರಾಮದಲ್ಲಿ ಈಚೆಗೆ ಮೂರು ಪುರಾತನ ಶಿಲಾ ಶಾಸನಗಳು ದೊರೆತಿವೆ.ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಪಟೇಲ್ ಕೆಂಚನಗೌಡ ಮತ್ತು ಕುಟುಂಬದವರಿಗೆ ಸೇರಿದ ಜಮೀನಿನಲ್ಲಿರುವ, 800 ವರ್ಷ ಹಳೆಯದಾದ ಕಲ್ಲೇಶ್ವರ ದೇವಾಲಯದ ಪೂರ್ವ ದಿಕ್ಕಿಗೆ ಗಿಡ-ಗಂಟಿಗಳಲ್ಲಿ ಈ ಶಾಸನಗಳು ಪತ್ತೆಯಾಗಿವೆ.
ಈ ಶಾಸನಗಳಲ್ಲಿ ಒಂದು ಬಾದಾಮಿ ಚಾಲುಕ್ಯರಿಗೆ, ಇನ್ನೊಂದು ರಾಷ್ಟ್ರಕೂಟರು ಹಾಗೂ ಮೂರನೇ ಶಾಸನ ಹರಪನಹಳ್ಳಿ ಪಾಳೇಗಾರರಿಗೆ ಸಂಬಂಧಿಸಿವೆ. ಇದೇ ಗ್ರಾಮದಲ್ಲಿ 1918ರಲ್ಲಿ ಒಂದು ಶಾಸನ ಪತ್ತೆಯಾಗಿತ್ತು. ಈಗ ದೊರೆತಿರುವ ಶಾಸನಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ ಎಂದು ಸಂಶೋಧಕ, ಸ್ಥಳೀಯ ಎಆರ್ಜಿ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಜೆ.ಕೆ. ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.
ಶಾಸನದಲ್ಲಿ 15ರಿಂದ 50 ಸಾಲುಗಳಿದ್ದು ಅವುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅವುಗಳನ್ನು ಶೋಧಿಸಲು ಶಾನುಭೋಗ ಷಡಾಕ್ಷರಪ್ಪ, ಕೆಂಚನಗೌಡ, ಹಳ್ಳಿಕೇರಿ ಕಲ್ಲೇಶ್, ರಾಘವೇಂದ್ರಾಚಾರ್, ಉಪನ್ಯಾಸಕರಾದ ಜೆ.ವಿ. ಮಲ್ಲಿಕಾರ್ಜುನ, ಶಂಕರಯ್ಯ, ಮೃತ್ಯುಂಜಯ ಸಹಕರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಾವಣಗೆರೆ ವಿವಿಯು, ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಜಾನಪದ ಪರಂಪರೆ ಸಾರುವ ಚಾರಿತ್ರಿಕ ಅವಶೇಷಗಳನ್ನು ಮುಂದಿನ ಪೀಳಿಗೆಗೆ ನೀಡುವುದಕ್ಕಾಗಿ, ನಗರದಲ್ಲಿ ಸುಸಜ್ಜಿತ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು. ಈ ಶಾಸನಗಳನ್ನು ವಿಶ್ವವಿದ್ಯಾಲಯ ಆವರಣಕ್ಕೆ ತಂದು ಸಂರಕ್ಷಿಸಬೇಕು ಎಂದು ಅವರು ವಿವಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.