ಬೆಂಗಳೂರು: ಪುಣೆಯಲ್ಲಿ ಕಳೆದ ವಾರ ನಡೆದ ಏಷ್ಯಾ ಅಥ್ಲೆಟಿಕ್ ಚಾಂಪಿಯನ್ಷಿಪ್ನ 400ಮೀ. ಹರ್ಡಲ್ಸ್ನಲ್ಲಿ ಕಂಚಿನ ಪದಕ ಜಯಿಸಿದ ಸತೀಂದರ್ ಸಿಂಗ್ ಅವರಿಗೆ ಆದಾಯ ತೆರಿಗೆ ಇಲಾಖೆಯ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ ಬುಧವಾರ ಸನ್ಮಾನಿಸಲಾಯಿತು.
ಪಂಜಾಬ್ ಮೂಲದ ಸತೀಂದರ್ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಿಕ್ರಿಯೇಷನ್ ಕ್ಲಬ್ನ ಮುಖ್ಯ ಪೋಷಕರಾದ ಕೆ. ಸತ್ಯನಾರಾಯಣ ಅವರು ಸತೀಂದರ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.
2011ರಲ್ಲಿ ಬೆಂಗಳೂರಿನಲ್ಲಿ ನಡೆದ 51ನೇ ಸೀನಿಯರ್ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಸತೀಂದರ್ ಚಿನ್ನ ಗೆದ್ದುಕೊಂಡಿದ್ದರು. ಕಳೆದ ವರ್ಷ ಹೈದರಾಬಾದ್ನಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ಸ್ನಲ್ಲಿ ಈ ಅಥ್ಲೀಟ್ 49.99 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿದ್ದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಎನಿಸಿದೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸತೀಂದರ್ `ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ನಮ್ಮ ಇಲಾಖೆಯಿಂದ ಸಾಕಷ್ಟು ಪ್ರೋತ್ಸಾಹ ಲಭಿಸಿದೆ. ಏಷ್ಯಾ ಅಥ್ಲೆಟಿಕ್ಸ್ನಲ್ಲಿ ಪದಕ ಜಯಿಸಿದ್ದು ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಿದೆ' ಎಂದು ನುಡಿದರು.
`2016ರ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಬೇಕು ಎನ್ನುವ ಗುರಿ ಹೊಂದಿದ್ದೇನೆ. ಅದಕ್ಕಾಗಿ ಈಗಿನಿಂದಲೇ ಅಭ್ಯಾಸ ಆರಂಭಿಸಿದ್ದೇನೆ. ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಇದಕ್ಕೆ ಪೂರಕ ವಾತಾವರಣವಿದೆ. ಅದಕ್ಕೂ ಮುನ್ನ ಮುಂಬರುವ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಹೆಗ್ಗುರಿ ಇದೆ' ಎಂದರು.