ಬಿಬಿಎಂಪಿ ಪ್ರಧಾನ ಕಚೇರಿಯಿಂದ ಮೆಜೆಸ್ಟಿಕ್ ಉದ್ದಗಲಕ್ಕೂ ಪಾದಚಾರಿ ರಸ್ತೆಯಲ್ಲಿ ಬೆಳೆಸಿದ ಮರಗಳ ಸುತ್ತಲೂ ಒಂದರಿಂದ ಒಂದೂವರೆ ಅಡಿ ಕಂದಕ ಅಗೆದಿರುತ್ತಾರೆ. ಆದರೆ ಈ ಕಂದಕಕ್ಕೆ ಸರಿಯಾದ ಸುರಕ್ಷತೆ ಮಾಡದೆ ಅವೈಜ್ಞಾನಿಕವಾಗಿ ನಿರ್ಮಿಸಿರುತ್ತಾರೆ.
ಅಕ್ಕಪಕ್ಕದಲ್ಲಿ ಪುಸ್ತಕ ಅಂಗಡಿ, ಹಣ್ಣು, ಕೈಗಾಡಿ ಮತ್ತಿತರ ಅನೇಕ ವ್ಯಾಪಾರಸ್ಥರುಗಳು ಪಾದಚಾರಿ ಸ್ಥಳವನ್ನು ಆಕ್ರಮಿಸಿ ಕೊಂಡಿರುತ್ತಾರೆ. ಹೀಗಾಗಿ ಜನ ಪಾದಚಾರಿ ರಸ್ತೆಯಲ್ಲಿ ಸರಾಗವಾಗಿ ಓಡಾಡುವುದೇ ದುಸ್ತರವಾಗಿದೆ.
ಪ್ರತಿ ಮರಗಳ ಸ್ಥಳದಲ್ಲಿ ಕಂದಕವನ್ನು ತೋಡಿದ್ದಾರೆ. ಅಲ್ಲಿ ಓಡಾಡುವ ಜನ ತಿಳಿಯದೆ ಕಂದಕಕ್ಕೆ ಬಿದ್ದು ಕೈಕಾಲು ಮತ್ತು ಮುಖ ಗಾಯ ಮಾಡಿಕೊಂಡಿರುತ್ತಾರೆ. ನಾನು ಈ ಪಾದಚಾರಿ ರಸ್ತೆಯಲ್ಲಿ ನಿತ್ಯವೂ ಓಡಾಡುತ್ತೇನೆ.
ಇತ್ತೀಚೆಗೆ ಕೆಲವು ಅಂಧ ಸ್ನೇಹಿತರು ಈ ಕಂದಕದಲ್ಲಿ ಬಿದ್ದು ತಲೆಗೆ ಮತ್ತು ಕೈಕಾಲುಗಳಿಗೆ ತೀವ್ರವಾಗಿ ಪೆಟ್ಟು ಮಾಡಿಕೊಂಡಿದ್ದು ಕಣ್ಣಾರೆ ಕಂಡಿದ್ದೇನೆ. ಇದನ್ನು ನೋಡಿದ ಜನ ಬಿಬಿಎಂಪಿಯ ಈ ಮಹಾ ಸಾಧನೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಕಂದಕಕ್ಕೆ ಸೂಕ್ತ ಸೌಲಭ್ಯ ಒದಗಿಸಿ ಮುಂದೆ ಆಗಬಹುದಾದ ಭಾರಿ ಅನಾಹುತಕ್ಕೆ ಇತಿಶ್ರೀ ಹಾಡುವರೆಂದು ನಂಬೋಣವೇ?