ಚಿಕ್ಕಬಳ್ಳಾಪುರ: ನಗರದ ಹೊರವಲಯದ ಕಂದವಾರ ಬಳಿಯಿರುವ ಬೃಹತ್ ಕೆರೆ ಸುತ್ತಮುತ್ತ ಹಸಿರು ಬೆಳೆಸುವ ಚಟುವಟಿಕೆ ನಡೆಯುತ್ತಿದೆ. ನೀರಿಲ್ಲದೆ ಬತ್ತಿರುವ ಕೆರೆಯ ಸುತ್ತಮುತ್ತಲ ಕಟ್ಟೆಯಲ್ಲಿ ಮತ್ತೆ ಹಸಿರು ನಳನಳಿಸತೊಡಗಿದೆ.
ಮಣ್ಣಿನ ಗುಡ್ಡೆಯಾಗಿ ಮಾರ್ಪಟ್ಟಿದ್ದ ಕೆರೆಯ ದಡದ ಪ್ರದೇಶ ಈಗ ಹಸಿರು ಹೊದಿಕೆಯಿಂದ ಕಂಗೊಳಿಸತೊಡಗಿದೆ. ಅದರ ಸೊಬಗು ಹೆಚ್ಚಿಸಲು ಬೃಹತ್ ಮರಗಳು ಇಡೀ ಆವರಣಕ್ಕೆ ನೆರಳಾಗಿ ಆಶ್ರಯ ನೀಡುತ್ತಿವೆ.
ಕೆರೆಯು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಕೆಲ ತಿಂಗಳ ಹಿಂದೆ ಸಾರ್ವಜನಿಕರು ದೂರಿದಾಗ, ಕೆರೆಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ನಗರಸಭೆ ಮತ್ತು ಜಿಲ್ಲಾಡಳಿತ ಆಶಾಭಾವನೆ ನೀಡಿತ್ತು.
ಕೆರೆಯಲ್ಲಿ ನೀರು ಇರುವ ಕಾರಣ ದೋಣಿ ವಿಹಾರ ಸೌಲಭ್ಯ ಕಲ್ಪಿಸುವ ಮತ್ತು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿತ್ತು. ಆದರೆ ನಂತರದ ದಿನಗಳಲ್ಲಿ ಯಾವುದೇ ಕಾಮಗಾರಿ ನಡೆಯಲಿಲ್ಲ.
ಈ ಮಧ್ಯೆ ಕೆರೆ ದಡ ಮತ್ತು ಕಟ್ಟೆ ಮೇಲೆ ಹಸಿರು ಹುಲ್ಲು ಬೆಳೆಸುತ್ತಿದ್ದು, ವಾಯುವಿಹಾರಿಗಳಿಗೆ ಸಂತೋಷ ಉಂಟು ಮಾಡಿದೆ. ಮಣ್ಣಿನ ಗುಡ್ಡೆಯಂತಿದ್ದ ಕೆರೆಕಟ್ಟೆ ಅಭಿವೃದ್ಧಿ ಆಗುತ್ತಿರುವುದು ಖುಷಿ ತಂದಿದೆ.