ಕಂಪ್ಲಿ: ಸ್ಥಳೀಯ ಶಿಬಿರದಿನ್ನಿ ಬಲಭಾಗದ ನಿವೇಶನಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 84 ಫಲಾನುಭವಿಗಳು ಪುರಸಭೆಗೆ ಹಣ ಪಾವತಿಸಿದ್ದು, ನಿವೇಶನ ವಿತರಿಸದ ಹಿನ್ನೆಲೆಯಲ್ಲಿ ದಾವಣಗೆರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಿಬಿರದಿನ್ನಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ 24 ವರ್ಷಗಳ ಹಿಂದೆ 637 ಜನರು ಶಿಬಿರದಿನ್ನಿ ಬಲಭಾಗದ ನಿವೇಶನಕ್ಕಾಗಿ ಪುರಸಭೆಗೆ ರೂ 350 ಪಾವತಿಸಿದ್ದಾರೆ. ಇದರಲ್ಲಿ ಪ. ಜಾತಿ ಮತ್ತು ಪಂ.ಪಂಗಡದ 84 ಜನರಿಗೆ ಇಲ್ಲಿಯವರೆಗೆ ನಿವೇಶನ ನೀಡಿಲ್ಲ. ಈ ಕುರಿತು ನಿರ್ದೇಶನಾಲಯ ಅಧಿಕಾರಿಗಳು ಜನತೆಯಿಂದ ಸಮಗ್ರ ಮಾಹಿತಿ ಸಂಗ್ರಹಿಸಿದರು.
ಸದ್ಯ ಶಿಬಿರದಿನ್ನಿಯಲ್ಲಿ 250 ನಿವೇಶನಗಳು ಮಾತ್ರ ಇದ್ದು, ಹಣ ಪಾವತಿಸಿದವರಿಗೆ ನಿವೇಶನ ನೀಡುವ ಕುರಿತು ದಾವಣಗೆರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪ್ರಭಾರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್. ಕೃಷ್ಣಮೂರ್ತಿ ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪ.ಜಾ ಮತ್ತು ಪ.ಪಂ ಫಲಾನುಭವಿಗಳಿಗೆ ಶಿಬಿರದಿನ್ನಿಯಲ್ಲಿ ನಿವೇಶನ ಹಂಚಿಕೆ ಸಂಬಂಧ ಶಾಸಕ ಟಿ.ಎಚ್. ಸುರೇಶಬಾಬು, ಜಿಲ್ಲಾಧಿಕಾರಿಯೊಂದಿಗೂ ಚಿರ್ಚಿಸಿ ಅಂತಿಮವಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಚಿಕ್ಕೇರೂರು ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಜಯಸಿಂಹ, ರಾಮಕೃಷ್ಣ, ಪುರಸಭೆ ಮುಖ್ಯಾಧಿಕಾರಿ ಎಚ್.ಎನ್. ಗುರುಪ್ರಸಾದ್, ಅಬ್ದುಲ್ ನಜೀರ್ ಸಾಹೆಬ್ ಹಾಜರಿದ್ದರು.