ಶಿರಸಂಗಿ (ತಾ-ಸವದತ್ತಿ:) ಈ ಬಾರಿ ಕಾಳಿಕಾದೇವಿಯ ಕ್ಷೇತ್ರದಲ್ಲಿ ನಡೆದ ವಿಶ್ವಕರ್ಮ ಮಹೋತ್ಸವದಲ್ಲಿ ವಿಶೇಷ ಮೆರುಗಿತ್ತು. ಕಾರಣ ಕನ್ನಡ ಸಾರಸ್ವತ ಲೋಕದ ಸಂಭ್ರಮಕ್ಕೆ ಕಾರಣರಾದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಉಪಸ್ಥಿತಿ.
ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ವಿಜೃಂಭಣೆಯಿಂದ ಶೋಭಾಯಾತ್ರೆ ನಡೆಯಿತು. ಡಾ ಕಂಬಾರ ದಂಪತಿಯನ್ನು ಬೆಳ್ಳಿ ರಥದಲ್ಲಿ ಕುಳ್ಳರಿಸಿ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಳಿಕಾದೇವಿ ದೇವಸ್ಥಾನಕ್ಕೆ ಕರೆತರಲಾಯಿತು.
ಮಾತೆಯರ ಪೂರ್ಣ ಕುಂಭಮೇಳ, ಡೊಳ್ಳ ಕುಣಿತ, ವಿವಿಧ ವಾದ್ಯ-ವೃಂದ ಮೆರವಣಿಗೆ ಮೆರಗು ತಂದಿದ್ದವು.
ಪ್ರತಿವರ್ಷವೂ ಶ್ರೀಕ್ಷೇತ್ರದಲ್ಲಿ ಛಟ್ಟಿ ಅಮಾವಾಸ್ಯೆ ಹಾಗೂ ಮುನ್ನಾದಿನ ವಿಶ್ವಕರ್ಮ ಮಹೋತ್ಸವ ಆಚರಿಸಲಾ ಗುತ್ತಿದ್ದು, ಅದರಂತೆ ಈ ಬಾರಿ ಆರಂಭ ವಾದ ಮಹೋತ್ಸವಕ್ಕೆ ವಿಶೇಷ ಸಂಭ್ರಮವಿತ್ತು.
ಅರೀಮಾದನಹಳ್ಳಿಯ ಶಿವ ಸುಜ್ಞಾನಮೂರ್ತಿ ಸ್ವಾಮೀಜಿ, ಹುಲಿಯೂರ ದುರ್ಗದ ಕರುಣಾಕರ ಸ್ವಾಮೀಜಿ, ತೇರದಾಳದ ಸವಿತೃ ಬ್ರಹ್ಮಾನಂದ ಸ್ವಾಮೀಜಿ, ಚನ್ನಮ್ಮನ ಕಿತ್ತೂರಿನ ಪ್ರಮೋದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಾಜ್ಯ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಡಾ. ಜಿ.ಜ್ಞಾನಾನಂದ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪ್ರೊ. ಪಿ.ಬಿ. ಬಡಿಗೇರ, ಕೋಶಾಧ್ಯಕ್ಷ ಜಗನ್ನಾಥ ಬಡಿಗೇರ, ಪ್ರಧಾನ ಕಾ ರ್ಯದರ್ಶಿಗಳಾದ ಕೆ.ಬಿ.ವಿಶ್ವಬ್ರಾಹ್ಮಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತೆರೆಸಾ ಜನ್ಮದಿನ ನಾಳೆ
ಬೆಳಗಾವಿ: ಮದರ್ ತೆರೆಸಾ ಜನ್ಮ ಶತಮಾನೋತ್ಸವ ಸಮಿತಿ ವತಿಯಿಂದ ನ.26 ರಂದು ಸಂಜೆ5.30ಕ್ಕೆ ಸೇಂಟ್ ಝೇವಿಯರ್ ಶಾಲೆಯಲ್ಲಿ ಜನ್ಮ ಶತಮಾನೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಯಾಗಿ ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಶಂಕರ ದಂಡಿನ, ಗೌರವ ಅತಿಥಿಯಾಗಿ ಮೇಯರ್ ಮಂದಾ ಬಾಳೇಕುಂದ್ರಿ, ಡಾ.ಪ್ರಭಾಕರ್ ಎಸ್ ಆಗಮಿಸಲಿದ್ದಾರೆ. ಬಿಷಪ್ ಪೀಟರ್ ಮಚಾಡೊ ಅಧ್ಯಕ್ಷತೆ ವಹಿಸಲಿದ್ದಾರೆ.