ನವದೆಹಲಿ: ಇಂದು ಬಹಳಷ್ಟು ಜನ ಸಾಹಿತಿಗಳು ಸಮಾಜವನ್ನು ಒಡೆಯುವಂತಹ ಅನಗತ್ಯ ಬರವಣಿಗೆಗಳನ್ನು ಬರೆಯುತ್ತಿರುವಂತಹ ಕಳವಳದ ಸಂದರ್ಭದಲ್ಲಿ, ಚಂದ್ರಶೇಖರ ಕಂಬಾರ ಅವರು ಜನಪದ ಸ್ಪರ್ಶದ ಮೂಲಕ ತಮ್ಮ ಕೃತಿಗಳಲ್ಲಿ ಸ್ಥಳೀಯ ಸಂಸ್ಕೃತಿ ಹಾಗೂ ಮಾನವೀಯತೆಯನ್ನು ಅಪರೂಪವಾಗಿ ಚಿತ್ರಿಸುತ್ತಿರುವ ಅನನ್ಯ ಲೇಖಕರಾಗಿದ್ದಾರೆ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಶ್ಲಾಘಿಸಿದರು.
ಭಾನುವಾರ ಇಲ್ಲಿನ ಕನ್ನಡ ಸಂಘ ಹಾಗೂ ಇತರೆ ಕನ್ನಡ ಸಂಘಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರನ್ನು ಸನ್ಮಾನಿಸಿದ ಸಂದರ್ಭದಲ್ಲಿ ಮಾತನಾಡಿದ ಮೊಯಿಲಿ, ಕಂಬಾರರು ತಮ್ಮ ಕೃತಿಗಳಲ್ಲಿ ಸ್ಥಳೀಯ ಅನುಭವಗಳನ್ನು ಅತ್ಯಂತ ಹೃದಯಂಗವಾಗಿ ಅನಾವರಣ ಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಧುನಿಕತೆಯ ಭರಾಟೆಯ ನಡುವೆಯೂ ಜನಪದದ ಮೂಲಕ ಕಂಬಾರ ಅವರು ತಮ್ಮ ಕವಿತೆ, ನಾಟಕ ಹಾಗೂ ಕಾದಂಬರಿಗಳನ್ನು ವಿಶಿಷ್ಟವಾಗಿ ರಚಿಸುತ್ತಿರುವುದು ಅವರ ಲೇಖನಿಯ ಬಲಾಢ್ಯತೆಯ ಸಂಕೇತವಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತ ನಾಡಿದ ಕಂಬಾರ ಅವರು, `ನಾನು ನನ್ನ ಬರವಣಿಗಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದೇನೆ. ಸಾಮಾನ್ಯ ಜನರನ್ನು ತಲುಪಲು ಜನಪದ ಮಾಧ್ಯಮ ಅದರಲ್ಲೂ ಸಾಹಿತ್ಯದ ದಾರಿ ಅತ್ಯುತ್ತಮವಾದದ್ದು~ ಎಂದು ಹೇಳಿದರು.
`ಆಧುನಿಕತೆಯ ಪ್ರವಾಹದಲ್ಲಿ ಜನಪದ ಕೊಚ್ಚಿಹೋಗುತ್ತಿದೆ~ ಎಂದು ಆತಂಕ ವ್ಯಕ್ತಪಡಿಸಿದ ಅವರು, `ಜನಪದದ ಜೀವಂತಿಕೆಯನ್ನು ರಕ್ಷಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಆಶಿಸಿದರು. ಇದೇ ವೇಳೆ ದಿವಂಗತ ಗೌರೀಶ ಕಾಯ್ಕಿಣಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ 2 ದಿನದ ವಿಚಾರ ಸಂಕಿರಣದಲ್ಲಿ ಸಾಹಿತಿಗಳಾದ ಪುರಷೋತ್ತಮ ಬಿಳಿಮಲೆ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ವಿಷ್ಣು ನಾಯಕ್, ಐ.ರಾಮಮೋಹನ ರಾವ್ ಮಾತನಾಡಿದರು.