ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ಕಂಬಾಳು ಗ್ರಾಮದಲ್ಲಿರುವ ಕಂಬಾಳು ಸಂಸ್ಥಾನ ಮಠದ ನೂತನ ಪಟ್ಟಾಧಿಕಾರ ಮಹೋತ್ಸವ ಮತ್ತು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳ ಗುರುವಂದನಾ ಸಮಾರಂಭ ಭಾನುವಾರ (ಜು.22) ಬೆಳಿಗ್ಗೆ 10.30ಕ್ಕೆ ಶ್ರೀಶೈಲ ಮಲ್ಲಿಕಾರ್ಜುನ ಮಂಟಪದಲ್ಲಿ ನಡೆಯಲಿದೆ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸಲ್ದ್ದಿದಾರೆ. ಬಿ.ಎಸ್. ಸಚ್ಚಿದಾನಂದಮೂರ್ತಿ ಮತ್ತು ಪಾಲನೇತ್ರ ಬರೆದಿರುವ `ಶಿವಸಂಗಮ~ ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಲೋಕಾರ್ಪಣೆ ಮಾಡಲಿದ್ದು, ಬಿ.ಎಸ್.ಕೆಂಪರಾಜು ಬರೆದಿರುವ `ಕಂಬಾಳು ಸಂಸ್ಥಾನ ಮಠ~ ಗ್ರಂಥವನ್ನು ಡಾ.ಬಿ.ನಂಜುಂಡಸ್ವಾಮಿ ಬಿಡುಗಡೆ ಮಾಡಲಿದ್ದಾರೆ.
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ, ಸುತ್ತೂರು ಶ್ರೀ ವೀರಸಿಂಹಾಸನಾ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಂಬಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಮತ್ತಿತರ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ದಾಸೋಹ ಭವನ, ನೈಸ್ ಸಂಸ್ಥೆ ಅಧ್ಯಕ್ಷ ಅಶೋಕ್ ಖೇಣಿ ಪ್ರಾರ್ಥನಾ ಮಂದಿರದ ಶಿಲಾನ್ಯಾಸ ಮಾಡಲಿದ್ದಾರೆ. ಅಖಿಲ ಭಾರತ ವೀರಶೈವ ಮಹಾ ಸಭಾದ ಅಧ್ಯಕ್ಷ ಎನ್.ತಿಪ್ಪಣ್ಣ, ಮಾಜಿ ಅಧ್ಯಕ್ಷ ಡಾ.ಭೀಮಣ್ಣ ಖಂಡ್ರೆ, ಎಲ್.ರಾಜಪ್ಪ, ನಾರಾಯಣಸ್ವಾಮಿರೆಡ್ಡಿ ಅವರನ್ನು ಸನ್ಮಾನಿಸಲಾಗುವುದು.