ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾಟ ಬಿಡಿ: ಮುಖಂಡರಿಗೆ ಜಿಗಜಿಣಗಿ ಕಿವಿಮಾತು

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ವಿಜಾಪುರ: `ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಜನ ಬೇಸತ್ತಿದ್ದಾರೆ. ರಾಜಕಾರಣ ಸಾಕು ಮಾಡಿ, ಅಭಿವೃದ್ಧಿಯತ್ತ ಗಮನ ಹರಿಸಿ. ನಾನು ದೊಡ್ಡವ, ನೀನು ದೊಡ್ಡವ ಎಂದು ನೀವು ಇದೇ ರೀತಿ ಜಗಳ ಮುಂದುವರಿಸಿದರೆ ಬರುವ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆಯಾದೀತು~ ಎಂದು ಸಂಸದ ರಮೇಶ ಜಿಗಜಿಣಗಿ ತಮ್ಮ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದರು.

`ನಾನು ಈ ಮಾತನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ಮುಖ್ಯಮಂತ್ರಿಗಳಿಗೂ ಹೇಳುತ್ತೇನೆ~ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಒಬ್ಬ ವ್ಯಕ್ತಿ ಮತ್ತು ಒಂದು ಜಾತಿಯಿಂದ ಪಕ್ಷ ಕಟ್ಟಲು ಆಗುವುದಿಲ್ಲ. ಎಲ್ಲ ಜಾತಿ-ಜನಾಂಗದವರೂ ಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಹಾಗೂ ಸಚಿವ ಗೋವಿಂದ ಕಾರಜೋಳ ಅವರ ಪಾತ್ರವೂ ಪ್ರಮುಖವಾಗಿದೆ. ನಾವಿಬ್ಬರೂ ಸೇರಿ ರಾಜ್ಯದ ಶೇ 24ರಷ್ಟು ದಲಿತರಲ್ಲಿ ಅರ್ಧದಷ್ಟು ಮತಗಳು ಬಿಜೆಪಿಗೆ ಬರುವಂತೆ ಮಾಡಿದ್ದೇವೆ. ಆದರೆ ಈ ಸಾಧನೆಯನ್ನು ಯಾರೂ ಸ್ಮರಿಸುತ್ತಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

`ಕೇವಲ ಮುಂದುವರಿದ ಜಾತಿಗಳಿಂದಷ್ಟೇ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಯಡಿಯೂರಪ್ಪ 50 ವರ್ಷಗಳಿಂದ ರಾಜ್ಯದಲ್ಲಿ ಸಂಚರಿಸಿ ಚಪ್ಪಲಿ ಹರಿದುಕೊಂಡರು. ಅನಂತಕುಮಾರ ಸಹ ಸಾಕಷ್ಟು ಶ್ರಮಪಟ್ಟರು. ಆದರೆ, ಆಗ ಬಿಜೆಪಿ ರಾಜ್ಯದಲ್ಲಿ ಏಕೆ ಅಧಿಕಾರಕ್ಕೆ ಬರಲಿಲ್ಲ? ನಾವು (ಜಿಗಜಿಣಗಿ-ಕಾರಜೋಳ) ಸೇರಿದ ನಂತರವಷ್ಟೇ ಬಿಜೆಪಿ ಏಕೆ ಅಧಿಕಾರಕ್ಕೆ ಬಂತು?~ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು. `ದಲಿತರಿಗೆ ಅನ್ಯಾಯ ಆದರೆ ಸಹಿಸುವುದಿಲ್ಲ. ಯಾವ ಪಕ್ಷಕ್ಕೂ ಹೋಗುವುದಿಲ್ಲ~ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT