ಬೆಂಗಳೂರು: ಕೆ.ಆರ್.ಮಾರುಕಟ್ಟೆ ಪಶ್ಚಿಮದ್ವಾರದ ಸೇತುರಾವ್ ರಸ್ತೆ ಬಳಿಯ ‘ನೈರುತ್ಯ ತಿರುವಿನ ಹೊಸ ಮಾರುಕಟ್ಟೆಯ ಮಳಿಗೆ’ (ಎಸ್ಡಬ್ಲ್ಯುಸಿಎನ್ಸಿಎಸ್) ಕಟ್ಟಡವನ್ನು ತೆರವುಗೊಳಿಸಲು ಮಳಿಗೆಯ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ‘ಕಟ್ಟಡದಲ್ಲಿ ಒಟ್ಟು 17 ಮಳಿಗೆಗಳಿವೆ.
ಇಲ್ಲಿನ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಕಟ್ಟಡ ತೆರವುಗೊಳಿಸಲು ಬಿಬಿಎಂಪಿ ಮುಂದಾಗಿದೆ. ಅಲ್ಲದೆ ಕಾರ್ಯಾಚರಣೆಗೆ ಮುನ್ನ ನಮಗೆ ಯಾವುದೆ ನೋಟಿಸ್ ನೀಡಿಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಕಾರ್ಯಾಚರಣೆ ನಡೆಯಲು ಬಿಡುವುದಿಲ್ಲ’ ಎಂದು ವ್ಯಾಪಾರಿ ಮಹೇಶ್ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ, ‘ಸುಮಾರು ಐವತ್ತು ವರ್ಷದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಕಟ್ಟಡ ಕೆಡವದೇ ಇದ್ದರೆ ಅದು ಕುಸಿದು ಬಿದ್ದು ಪ್ರಾಣಹಾನಿಯಾಗುವ ಸಂಭವವಿದೆ. ಈ ಬಗ್ಗೆ ಕಟ್ಟಡದಲ್ಲಿರುವ ವ್ಯಾಪಾರಿಗಳಿಗೂ ತಿಳಿಸಲಾಗಿದೆ. ಕಟ್ಟಡದಲ್ಲಿರುವ ವ್ಯಾಪಾರಿಗಳಿಗೆ ಮಾರುಕಟ್ಟೆಯ ಬೇರೆ ಕಡೆ ಮಳಿಗೆಗಳ ವ್ಯವಸ್ಥೆ ಮಾಡಲಾಗುವುದು’ ಎಂದರು.
‘ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ ಸೇತುರಾವ್ ರಸ್ತೆಯ ಪಾದಚಾರಿ ಮಾರ್ಗದ ಗ್ರಿಲ್ ತೆರವುಗೊಳಿಸಲಾಗಿದೆ. ಮಂಗಳವಾರ ಕಟ್ಟಡ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ, ವ್ಯಾಪಾರಿಗಳ ವಿರೋಧದ ಕಾರಣದಿಂದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ವ್ಯಾಪಾರಿಗಳ ಮನವೊಲಿಸಿ ಕಟ್ಟಡ ತೆರವುಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.
‘ಸೇತುರಾವ್ ರಸ್ತೆಯನ್ನು ಕಾಂಕ್ರಿಟ್ ರಸ್ತೆಯಾಗಿ ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ರಸ್ತೆಯ ಒಂದು ಭಾಗದ ಪಾದಚಾರಿ ಮಾರ್ಗ ತೆರವುಗೊಳಿಸುವುದು ಅನಿವಾರ್ಯ. ಈ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಮಾರುಕಟ್ಟೆಯ ಪಕ್ಕದ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ’ ಎಂದು ಹೇಳಿದರು.
ಪಾದಚಾರಿ ಮಾರ್ಗದ ಗ್ರಿಲ್ ತೆರವುಗೊಳಿಸಿದ್ದನ್ನು ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳು ಮಂಗಳವಾರ ಕೆಲ ಕಾಲ ಪ್ರತಿಭಟನೆ ನಡೆಸಿದರು. ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.