ಬೆಂಗಳೂರು: ನಗರದ ಗಂಗಮ್ಮನಗುಡಿ ಮತ್ತು ಜೆ.ಪಿ.ನಗರದಲ್ಲಿ ಶನಿವಾರ ಸಂಭವಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಗಂಗಮ್ಮನಗುಡಿ ಸಮೀಪದ ಅಬ್ಬಿಗೆರೆಯಲ್ಲಿ ಎಂ.ಎನ್.ಪಾಲಿಟೆಕ್ನಿಕ್ ಕಾಲೇಜಿನ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ರಾಮ (20) ಎಂಬ ಕಾರ್ಮಿಕ ಸಾವನ್ನಪ್ಪಿದ್ದಾರೆ.
ಮೂಲತಃ ಗುಲ್ಬರ್ಗದ ರಾಮ, ಅಣ್ಣಂದಿರಾದ ರಂಗಪ್ಪ ಮತ್ತು ಮರಿಯಪ್ಪ ಅವರ ಜತೆ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಅಬ್ಬಿಗೆರೆಯಲ್ಲೇ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದ ಸಹೋದರರು, ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
‘ಘಟನೆ ಸಂಬಂಧ ಕಟ್ಟಡದ ಗುತ್ತಿಗೆದಾರ ಬ್ರಹ್ಮಾರೆಡ್ಡಿ, ಮೇಸ್ತ್ರಿ ಕಾಟಯ್ಯ ಹಾಗೂ ಕಾಲೇಜು ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಜೆ.ಪಿ.ನಗರ: ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬಾರ್ ಬೆಂಡಿಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದು ಭೀಮಾ (35) ಎಂಬ ಕಾರ್ಮಿಕ ಮೃತಪಟ್ಟಿರುವ ಘಟನೆ ಜೆ.ಪಿ.ನಗರ ಏಳನೇ ಹಂತದ ಗುರುರಾಘವೇಂದ್ರ ಲೇಔಟ್ನಲ್ಲಿ ನಡೆದಿದೆ.
ಬನಶಂಕರಿ ಸಮೀಪದ ಭವಾನಿನಗರ ನಿವಾಸಿಯಾದ ಭೀಮಾ, ಗುರುರಾಘವೇಂದ್ರ ಲೇಔಟ್ನಲ್ಲಿ ನಾಲ್ಕು ಅಂತಸ್ತಿನ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿರುವ ನಂಜುಂಡರಾಜು ಎಂಬುವರ ಬಳಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ
ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಭೀಮಾ, ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ತೀವ್ರ
ರಕ್ತಸ್ರಾವವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು. ಘಟನೆ ಕುರಿತು ಪ್ರಕರಣ ದಾಖಲಾಗಿದೆ.