ಬೆಂಗಳೂರು: ಮೋಜಿನ ಕೂಟದಲ್ಲಿ ಪಾನಮತ್ತನಾದ ವ್ಯಕ್ತಿ ಕಟ್ಟಡದ ಮೂರನೆ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಕಾಟನ್ಪೇಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ತಮಿಳುನಾಡು ಮೂಲದ ಶಿವಸ್ವಾಮಿ (50) ಮೃತಪಟ್ಟವರು. ಗುರುವಾರ ನಗರಕ್ಕೆ ಬಂದಿದ್ದ ಅವರು, ಕಾಟನ್ಪೇಟೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ರಾತ್ರಿ ಮನೆ ಮಹಡಿಯಲ್ಲಿ ಏರ್ಪಡಿಸಿದ್ದ ಮೋಜಿನ ಕೂಟದಲ್ಲಿ ಸಂಬಂಧಿಕರೊಂದಿಗೆ ಮದ್ಯ ಕುಡಿದ ಶಿವಸ್ವಾಮಿ, ನಿಯಂತ್ರಣ ತಪ್ಪಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ. ಗಾಯಗೊಂಡ ಅವರನ್ನು ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಶನಿವಾರ ಬೆಳಿಗ್ಗೆ ಅವರು ಮೃತಪಟ್ಟರು. ಕಾಟನ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ವಿಭಜಕಕ್ಕೆ ಬೈಕ್ ಗುದ್ದಿಸಿದ ಪರಿಣಾಮ ವಿವೇಕ್ ಗಣಪತಿ (21) ಎಂಬ ಬಿಬಿಎಂ ವಿದ್ಯಾರ್ಥಿ ಸಾವನ್ನಪ್ಪಿ, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ನಡೆದಿದೆ.
`ಇಂದಿರಾನಗರದ ಕಾವೇರಿ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ವಿವೇಕ್, ತನ್ನ ಸ್ನೇಹಿತ ಕವನ್ ಜತೆ ಶುಕ್ರವಾರ ರಾತ್ರಿ ಬೈಕ್ನಲ್ಲಿ ಮೋಜಿನ ಸವಾರಿ ನಡೆಸುತ್ತಿದ್ದರು. ಇಬ್ಬರೂ ಪಾನಮತ್ತರಾಗಿ ಬನ್ನೇರುಘಟ್ಟ ರಸ್ತೆಯಲ್ಲಿ ಹೋಗುತ್ತಿದ್ದಾಗ, ಬೈಕ್ ಸವಾರ ವಿವೇಕ್ ನಿಯಂತ್ರಣ ಕಳೆದುಕೊಂಡ. ಈ ವೇಳೆ ಬೈಕ್ ಅಡ್ಡಾದಿಡ್ಡಿಯಾಗಿ ಚಲಿಸಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಘಟನೆಯಿಂದ ಕೆಳಗೆ ಬಿದ್ದ ಇಬ್ಬರ ತಲೆಗೂ ಗಂಭೀರ ಪೆಟ್ಟು ಬಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು~ ಎಂದು ಪೊಲೀಸರು ಹೇಳಿದರು.
ವೈದ್ಯರ ಸಲಹೆ ಮೇರೆಗೆ ವಿವೇಕ್ನನ್ನು ಸೆಂಟ್ಜಾನ್ಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಆತ, ಶನಿವಾರ ಬೆಳಿಗ್ಗೆ ಸಾವನ್ನಪ್ಪಿದ. ಕವನ್ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿವೇಕ್ ಮತ್ತು ಕವನ್ ಕೊಡಗಿನವರಾಗಿದ್ದು, ಕೋರಮಂಗಲದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಮೈಕೊಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.