ಹಿಂದೆ ನಮ್ಮ ದೇಶದ ಪೊಲೀಸ್ ಠಾಣೆಯೊಂದರಲ್ಲಿ ಸಾಮೂಹಿಕ ಅತ್ಯಾಚಾರ ಘಟಿಸಿ, ಅದರಲ್ಲಿ ಪಾಲ್ಗೊಂಡಿದ್ದ ಎಲ್ಲ ಪೊಲೀಸರೂ ಏಡ್ಸ್ ರೋಗಕ್ಕೆ ತುತ್ತಾಗಿದ್ದರು. ಬಲಾತ್ಕಾರಕ್ಕೆ ಒಳಗಾದ ಮಹಿಳೆ ತನಗೆ ಏಡ್ಸ್ ರೋಗ ಇದ್ದ ವಿಷಯವನ್ನು ಉದ್ದೇಶಪೂರ್ವಕವಾಗಿಯೇ ಬಾಯಿ ಬಿಟ್ಟಿರಲಿಲ್ಲ. ಹೆಣ್ಣನ್ನು ಅತ್ಯಂತ ಗೌರವ ಭಾವದಿಂದ ಕಾಣುವ ನಮ್ಮ ನೆಲದಲ್ಲೂ ಸಾಮೂಹಿಕ ಅತ್ಯಾಚಾರ ಈಗೀಗ ಒಂದು ಪಿಡುಗಾಗುತ್ತಿದೆ. ಮೊದಲು ದೆಹಲಿಯಲ್ಲಿ ಅಪರೂಪಕ್ಕೊಮ್ಮೆ ಕೇಳಿಬರುತ್ತಿದ್ದ ಇಂತಹ ಘಟನೆಗಳು, ಈಗ ಯಾವ ಮೂಲೆಯಲ್ಲಿ ಬೇಕಾದರೂ ನಡೆಯಬಹುದು ಎಂಬಂತಾಗಿದೆ.
ಇತ್ತೀಚೆಗೆ 25 ದಿನಗಳ ಅವಧಿಯಲ್ಲಿ ದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಲ್ಲಿ ಶೇ 10ರಷ್ಟು ಹರ್ಯಾಣ ರಾಜ್ಯವೊಂದರಲ್ಲೇ ನಡೆದಿವೆ. ಅಲ್ಲಿ 2011ರಲ್ಲಿ 773 ಅತ್ಯಾಚಾರ ಪ್ರಕರಣಗಳು ನಡೆದಿದ್ದರೆ, ಈ ವರ್ಷದ ಮೊದಲ ಆರು ತಿಂಗಳಲ್ಲೇ 367 ಪ್ರಕರಣಗಳು ವರದಿಯಾಗಿವೆ. ಬಿಹಾರದಲ್ಲಿ 2011ರಿಂದ ಈವರೆಗೆ 1140 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ.
ಅವುಗಳಲ್ಲಿ ಪ್ರಮುಖವಾಗಿ ಡಬ್ಲ್ಯು.ಬಿ. ಸ್ಟ್ಯಾಂಡರ್ಡ್ಸ್, ಡಯಾನಾ ರಸಲ್, ಪೋರ್ಟರ್ ಹಾಗೂ ಇತರರು ಹೇಳುವಂತೆ, ಅತ್ಯಾಚಾರ ಒಬ್ಬನಿಂದ ಆಗಿರಲಿ ಅಥವಾ ಸಾಮೂಹಿಕವಾಗೇ ನಡೆದಿರಲಿ ಅದರಲ್ಲಿ ಪಾಲ್ಗೊಳ್ಳುವವರಲ್ಲಿ ಬಹುತೇಕರು ಸಾಮಾನ್ಯವಾಗಿ ಆ ಸಂತ್ರಸ್ತೆಗೆ ಪರಿಚಯದವರೇ ಆಗಿರುತ್ತಾರೆ. ಕೆಲವೊಮ್ಮೆ ಗುಂಪಿನ ಒಬ್ಬ ಹುಡುಗ ಅಥವಾ ಆ ಹುಡುಗಿಯ ಗೆಳತಿಯೇ ಇಂತಹ ಕಾರ್ಯಕ್ಕೆ ಕುಮ್ಮಕ್ಕು ನೀಡಿರುತ್ತಾರೆ. ತೀರಾ ಸಣ್ಣ ಕಾರಣಗಳಿಗಾಗಿ ಹುಡುಗಿಯರ ಮೇಲೆ ಸೇಡು ತೀರಿಸಿಕೊಳ್ಳಲು ಅತ್ಯಾಚಾರ ನಡೆಯುವುದೂ ಇದೆ.
ಇಂತಹ ಸ್ಥಿತಿಗೆ ಕಾರಣ ಏನು, ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ಈಗ ಸಮಾಜದ ಮುಂದೆ ಸವಾಲಾಗಿ ನಿಂತಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ವೇಷಭೂಷಣ, ಆಹಾರ ಪದ್ಧತಿ, ಸಿನಿಮಾ ಸಂಸ್ಕೃತಿ, ಬಿಂದಾಸ್ ಜೀವನ ಶೈಲಿ ಎಲ್ಲವೂ ಇಂತಹ ಕೃತ್ಯಕ್ಕೆ ಕೊಡುಗೆ ನೀಡುತ್ತಿವೆ ಎನಿಸುತ್ತದೆ. ವಿಶ್ವದಾದ್ಯಂತ ಅತ್ಯಾಚಾರದ ಪಿಡುಗು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ.
ಇಷ್ಟಾದರೂ ಅದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೇ ಇರುವುದನ್ನು ನೋಡಿದರೆ ಇಡೀ ಸಮಾಜವೇ ಇಂತಹ ಕೆಲವೇ ಕೆಲವು ವ್ಯಕ್ತಿಗಳ ಎದುರು ನಿಂತು `ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?' ಎಂದು ಕೇಳುತ್ತಿರುವಂತೆ ಭಾಸವಾಗುತ್ತಿದೆ.
ಎಲ್ಲೋ ಇಂತಹ ಘಟನೆ ನಡೆದರೆ ನಮಗ್ಯಾಕೆ ಎಂಬ ಭಾವನೆ ಸಹ ಹಲವರಲ್ಲಿ ಮನೆ ಮಾಡಿರುತ್ತದೆ. ಇಂತಹ ಭಾವನೆಯನ್ನು ಹೊಡೆದೋಡಿಸಿ, ಈ ಸಾಮಾಜಿಕ ಪಿಡುಗಿನ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸದಿದ್ದರೆ, ಮುಂದಿನ ಪೀಳಿಗೆಯನ್ನು ನಾವು ಪಾಪಕೂಪಕ್ಕೆ ತಳ್ಳಲು ಸಿದ್ಧರಾಗಿದ್ದೇವೆ ಎಂದೇ ಅರ್ಥ.
ವಿಕೃತಿಗೆ ಹಾಕಿ ಕಡಿವಾಣ
* ಹಿಂದೆಲ್ಲ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯಿಂದ ಕತ್ತರಿ ಪ್ರಯೋಗ ನಡೆಯುತ್ತಿತ್ತು. ಆದರೆ ಈಚೆಗಂತೂ ಟಿ.ವಿ.ಯಲ್ಲಿ ಪ್ರಸಾರವಾಗುವ ಸಿನಿಮಾ ಹಾಗೂ ಇತರ ಅನೇಕ ಕಾರ್ಯಕ್ರಮಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ಲೈಂಗಿಕ ಅತ್ಯಾಚಾರ, ದೌರ್ಜನ್ಯಗಳನ್ನು ವಿವರವಾಗಿ ತೋರಿಸುತ್ತಾರೆ. ಇದರಿಂದ ಇಂತಹವರಿಗೆ ಹೊಸ ಹೊಸ ಕಲ್ಪನೆಗಳು ದೊರಕುವುದರಲ್ಲಿ ಅನುಮಾನವಿಲ್ಲ. ಇಂತಹ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು.
* ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳು ಗೌರವದಿಂದ ಕಾಣುವಂತೆ ಮಾಡುವಲ್ಲಿ ಎಲ್ಲ ತಾಯಂದಿರು, ಶಾಲಾ ಉಪಾಧ್ಯಾಯರು ಮುಖ್ಯ ಪಾತ್ರ ವಹಿಸಬೇಕು.
* ಹೆಣ್ಣು ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ನೆರವಾಗುವ ಕರಾಟೆ ಮುಂತಾದವುಗಳ ತರಬೇತಿ ನೀಡುವ ಜವಾಬ್ದಾರಿಯನ್ನು ಶಾಲಾ ಕಾಲೇಜುಗಳು ವಹಿಸಿಕೊಳ್ಳಬೇಕು. ಪುರುಷನೊಬ್ಬ ಆಕ್ರಮಣ ಮಾಡಿದರೆ ಅವನನ್ನು ಹೇಗೆ ಎದುರಿಸಬೇಕು ಎಂಬ ತರಬೇತಿಯನ್ನೂ ಕೊಡಬೇಕು.
* ಮೆಣಸಿನ ಪುಡಿ ಸ್ಪ್ರೇಗಳು ಅಂಗಡಿಗಳಲ್ಲಿ ಸುಲಭವಾಗಿ ಸಿಗುವಂತೆ ಆಗಬೇಕು. ಅಗತ್ಯ ಬಂದರೆ ಬಡ ಹೆಣ್ಣುಮಕ್ಕಳಿಗೆ ಅದನ್ನು ಪುಕ್ಕಟೆಯಾಗಿಯೂ ಹಂಚಬೇಕು. ಎಲ್ಲ ಮಹಿಳೆಯರೂ ಸದಾ ಅದನ್ನು ತಮ್ಮ ಬಳಿಯೇ ಇಟ್ಟುಕೊಂಡಿರಬೇಕು.
* ಹೆತ್ತವರು ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸುವಾಗ ಅಥವಾ ಹೆಣ್ಣು ಮಕ್ಕಳೇ ಹೊರಗೆ ಹೋಗುವಾಗ ಜಾಗರೂಕರಾಗಿದ್ದು, ನಿರ್ಜನ ಪ್ರದೇಶಗಳಿಂದ ದೂರವಿದ್ದರೆ ಒಳ್ಳೆಯದು. ಇದರಿಂದ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಬಹುದು. ಆದರೆ ನಮ್ಮನ್ನು ಆಳುವವರು ನಮಗೆ ರಕ್ಷಣೆ ನೀಡಲು ವಿಫಲರಾದಾಗ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಷ್ಟೆ!