ಉಡುಪಿ: ಅಂಬರೀಶ್, ಉಪೇಂದ್ರ ಮತ್ತು ರಮ್ಯಾ ಅಭಿನಯದ `ಕಠಾರಿವೀರ ಸುರಸುಂದರಾಂಗಿ~ ಚಿತ್ರದಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ ದೃಶ್ಯಗಳಿವೆ ಎಂದು ಶೀರೂರು ಮಠದ ಲಕ್ಷ್ಮಿವರತೀರ್ಥ ಸ್ವಾಮೀಜಿ ನಗರದ ಗೀತಾಂಜಲಿ ಚಿತ್ರಮಂದಿರ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದ್ದರಿಂದ ಪ್ರದರ್ಶನವನ್ನು ರದ್ದುಗೊಳಿಸಲಾಯಿತು.
ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಶಿಷ್ಯರ ಜೊತೆ ಬೆಳಿಗ್ಗೆ ಚಿತ್ರಮಂದಿರಕ್ಕೆ ಬಂದ ಸ್ವಾಮೀಜಿ, ಯಾವುದೇ ಕಾರಣಕ್ಕೂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಚಿತ್ರಮಂದಿರದ ವ್ಯವಸ್ಥಾಪಕರು ಪ್ರದರ್ಶನ ರದ್ದು ಮಾಡಿದ್ದರಿಂದ ಸ್ವಾಮೀಜಿ ಪ್ರತಿಭಟನೆ ವಾಪಸ್ ಪಡೆದರು.
`ಚಿತ್ರದಲ್ಲಿ ದೇವತೆಗಳನ್ನು ಅವಹೇಳನ ಮಾಡಿ ಹಿಂದೂ ಧರ್ಮಕ್ಕೆ ಧಕ್ಕೆ ತರಲಾಗಿದೆ. ಇಂಥ ಚಿತ್ರಗಳನ್ನು ನಿರ್ಮಿಸಬಾರದು, ಈ ಚಿತ್ರಗಳಲ್ಲಿ ಯಾರೂ ಅಭಿನಯಿಸಬಾರದು, ನಿರ್ಮಿಸಿದರೂ ಯಾರೂ ನೋಡಬಾರದು~ ಎಂದು ಸ್ವಾಮೀಜಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
`ನಾಯಕನಟ ದೇವತೆಗಳನ್ನು ಹೊಡೆಯುವ ದೃಶ್ಯ ಚಿತ್ರದಲ್ಲಿದೆ ಎಂದು ಗೊತ್ತಾಗಿದೆ. ಇದರಿಂದ ಹಿಂದೂಗಳ ಭಾವನೆಗೆ ಘಾಸಿಯಾಗುತ್ತದೆ. ಅಷ್ಟಮಠಾಧೀಶರಿರುವ ಸ್ಥಳದಲ್ಲಿ ಇಂಥ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವಿಲ್ಲ~ ಎಂದು ಹೇಳಿದರು.
ಬೆಳಗಿನ ಪ್ರದರ್ಶನ ರದ್ದಾಗಿ, ಹಣ ವಾಪಸ್ ನೀಡಲಾಯಿತು. ಇದರಿಂದ ಕೆಲವರು ಪೋಸ್ಟರ್ ಹರಿದದರು.