ಚೆನ್ನೈ (ಪಿಟಿಐ): ಶ್ರೀಲಂಕಾ ಪ್ರವಾಸಕ್ಕೆ ತೆರಳಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಸೋಮವಾರ ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಡೆಸಿದರು.
ಮಹೇಂದ್ರ ಸಿಂಗ್ ದೋನಿ ನೇತೃತ್ವದ ಬಳಗ ಸುಮಾರು ನಾಲ್ಕು ಗಂಟೆಗಳ ಕಾಲ ವಿವಿಧ ರೀತಿಯ ತಾಲೀಮಿನಲ್ಲಿ ಪಾಲ್ಗೊಂಡಿತು. ಕೋಚ್ ಡಂಕನ್ ಫ್ಲೆಚರ್, ಬೌಲಿಂಗ್ ಕೋಚ್ ಜೋ ಡೇವ್ಸ್ ಮತ್ತು ಫೀಲ್ಡಿಂಗ್ ಕೋಚ್ ಟ್ರೆವರ್ ಪೆನ್ನಿ ಅವರು ಆಟಗಾರರಿಗೆ ಮಾರ್ಗದರ್ಶನ ನೀಡಿದರು.
ಆರಂಭದಲ್ಲಿ ಕೆಲಹೊತ್ತು ದೈಹಿಕ ಕಸರತ್ತು ನಡೆಸಿದ ಆಟಗಾರರು ಬಳಿಕ 20 ನಿಮಿಷಗಳ ಕಾಲ ಫುಟ್ಬಾಲ್ ಆಡಿದರು. ಅನಂತರ ಫೀಲ್ಡಿಂಗ್ ತಾಲೀಮು ನಡೆಸಿದರಲ್ಲದೆ, ನೆಟ್ ಪ್ರಾಕ್ಟೀಸ್ನಲ್ಲಿ ಪಾಲ್ಗೊಂಡರು.
ಭಾರತ ತಂಡ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳನ್ನು ಆಡಲು ಬುಧವಾರ ಸಂಜೆ ಶ್ರೀಲಂಕಾಕ್ಕೆ ಪ್ರಯಾಣಿಸಲಿದೆ.