ಚನ್ನಮ್ಮನ ಕಿತ್ತೂರು (ಕಡತನಾಳ): ಸಂಗೊಳ್ಳಿ-ಇಟಗಿ ಕ್ರಾಸ್ ಮುಖ್ಯ ರಸ್ತೆಯ ಕಡತನಾಳ ಗ್ರಾಮದ ಹತ್ತಿರ ಬರುವ ಕಡತನಾಳ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.
ನಬಾರ್ಡ್ ಯೋಜನೆಯಡಿ ರೂ. 45ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ಮೇಲುಸ್ತುವಾರಿ ನಡೆದಿದೆ. ಸೇತುವೆ ಹತ್ತಿರದ ಸುಮಾರು ಎರಡು ನೂರು ಮೀಟರ್ ರಸ್ತೆಯನ್ನೂ ದುರಸ್ತಿ ಮಾಡಲಾಗುತ್ತಿದೆ.
ಮೊದಲಿದ್ದ ಸೇತುವೆ ಮೇಲೆ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆಯವರು ಈಗಿರುವ ಅಂತರ ಹೆಚ್ಚಿಸಿ ಸೇತುವೆ ನಿರ್ಮಾಣ ಮಾಡುವ ಕ್ರಿಯಾ ಯೋಜನೆ ಸಿದ್ಧಪಡಿಸಿದರು. `ಸೂಕ್ತ ಅಂತರ ಹಾಗೂ ಅದರ ಸಮೀಪದ ರಸ್ತೆ ದುರಸ್ತಿಯಿಂದಾಗಿ ಈ ಸೇತುವೆ ಮೇಲಿಂದ ಹಾದು ಹೋಗುವ ಲೋಡ್ ತುಂಬಿದ ವಾಹನಗಳಿಗೆ ಅನುಕೂಲವಾದಂತಾಗಿದೆ~ ಎಂದು ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ.