ಕಡಬ (ಉಪ್ಪಿನಂಗಡಿ): ಪುತ್ತೂರು ತಾಲ್ಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಕಡಬ ಶಾಖೆಯಲ್ಲಿ ರಬ್ಬರ್ ಖರೀದಿ ಕೇಂದ್ರವನ್ನು ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಾವತಿ ಶಿವರಾಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಬ್ಬರ್ ಬೆಳೆಗೆ ಉತ್ತಮ ಧಾರಣೆ ಇದ್ದು, ರೈತರು ಯಾವುದೇ ಖಾಸಗಿ ಸಂಸ್ಥೆಗಳ ಮಾತಿಗೆ ಮರಳಾಗದೆ ರೈತರು ಹುಟ್ಟು ಹಾಕಿದ ಸಂಸ್ಥೆಗೆ ನೀಡಬೇಕು. ಆ ಮೂಲಕ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವುದ ರೊಂದಿಗೆ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಮನವಿ ನೀಡಿದರು.
ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಗುಣಮಟ್ಟದ ರಬ್ಬರ್ಗೆ ಸಂಘದಲ್ಲಿ ನ್ಯಾಯಯುತ ಧಾರಣೆ ನೀಡಿ ಖರೀದಿಸಲಾಗುವುದು. ಶೀಘ್ರದಲ್ಲಿ ಕೆಯ್ಯೂರು ರಬ್ಬರ್ ಉತ್ಪಾದಕರ ಸಂಘದಲ್ಲಿ ರಬ್ಬರ್ ಖರೀದಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕಡಬ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶ್ರಫ್ ಶೇಡಿಗುಂಡಿ, ಕಡಬ ಸಹಕಾರಿ ಬೇಂಕ್ ಅಧ್ಯಕ್ಷ ಚಂದ್ರಶೇಖರ ಗೌಡ, ಹೊಸಮಠ ಸಿ.ಎ. ಬ್ಯಾಂಕ್ ಅಧ್ಯಕ್ಷ ಕರುಣಾಕರ ಗೋಗಟೆ, ಸಂಘದ ಉಪಾಧ್ಯಕ್ಷ ರಾಯ್ ಅಬ್ರಹಾಂ, ನಿರ್ದೇಶಕರುಗಳಾದ ಎನ್.ವಿ.ವ್ಯಾಸ, ಜಾರ್ಜ್ ಕುಟ್ಟಿ ಉಪದೇಶಿ, ರಮೇಶ್ ಕಲ್ಪುರೆ, ಸುಭಾಶ್ ನಾಯಕ್, ಸತ್ಯಾನಂದ ಗೌಡ, ಬೈರ ಮುಗೇರ, ಅರುಣಾಕ್ಷಿ, ಕಾರ್ಯದರ್ಶಿ ಈಶ್ವರ ಭಟ್ ಮೊದಲಾದವರು ಇದ್ದರು.