ಮಲೇಬೆನ್ನೂರು: ಸಮೀಪದ ಕಡಾರನಾಯಕನಹಳ್ಳಿಯ 2 ದೇವಾಲಯ ಹಾಗೂ ಒಂದು ಬೀದಿಯಲ್ಲಿನ 4 ಮನೆಗಳ ಬೀಗ ಮುರಿದು ಕಳವು ಮಾಡಿದ ಘಟನೆ ಶುಕ್ರವಾರ ನಡೆದಿದೆ.
ರಾಮಾಂಜನೇಯ ದೇವಾಲಯದ ಉತ್ಸವಮೂರ್ತಿ, ದೇವರ ಕಣ್ಣು, ತಾಳಿ ಗುಂಡು, ಬೆಳ್ಳಿ ಪ್ರಭಾವಳಿ ಚಿನ್ನಾಭರಣ, ಟ್ರೆಜರಿ ಮತ್ತು ಯೋಗಿನಾರಾಯಣ ಸ್ವಾಮಿ ದೇವಾಲಯದ ಟ್ರೆಜರಿ ಒಡೆದು ಒಳಗಿದ್ದ ಹಣ ದೋಚಿದ ಕಳ್ಳರು ಗ್ರಾಮದ ಹೊರವಲಯದ ಜಮೀನಿನಲ್ಲಿ ಕಬ್ಬಿಣದ ಟ್ರೆಜರಿ ಕಬ್ಬಿಣದ ಹಾರೆಕೋಲನ್ನು ಬಿಟ್ಟುಹೋಗಿದ್ದಾರೆ.
ಬೆಳಿಗ್ಗೆ ದೇವಾಲಯಕ್ಕೆ ಎಂದಿನಂತೆ ಬಂದ ಅರ್ಚಕ ಗುರುರಾಜ್ ಅವರಿಗೆ ಗೊತ್ತಾಗಿದೆ. ವಿಷಯ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಕೈಬಳ್ಳಿ ನಾಗರಾಜ್ ಎಂಬುವವರ 2 ಬೈಸಿಕಲ್ ಕೂಡ ಹೊತ್ತೊಯ್ದಿದ್ದಾರೆ. ಬೀಗಹಾಕಿಕೊಂಡು ಮಣಿಪಾಲಕ್ಕೆ ತೆರಳಿದ್ದ ಡಾ.ದೇವೆಂದ್ರಪ್ಪ, ಅದೇ ಗ್ರಾಮದ ಮೂರ್ತೆಪ್ಪ, ಸಹದೇವಪ್ಪ ಎಂಬುವವರ ಮನೆ ಬೀಗ ಮುರಿದುಹಾಕಿ ಕಳವು ಮಾಡಿದ್ದಾರೆ. ಕಳವಾದ ವಸ್ತುಗಳ ವಿವರ ತಿಳಿದುಬಂದಿಲ್ಲ.
ಗ್ರಾಮದಲ್ಲಿ ಇಂತಹ ಪ್ರಕರಣ ನಡೆದಿರುವುದು ಮೊದಲ ಬಾರಿ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಕಳವಾದ ವಸ್ತುಗಳ ಮೌಲ್ಯದ ಕುರಿತು ತನಿಖೆ ಮುಂದುವರಿಸಿದ್ದಾರೆ.