ಕಡೂರು: ತಾಲ್ಲೂಕಿನ ಮಲ್ಲೇಶ್ವರ ಗ್ರಾಮದ ಗ್ರಾಮ ದೇವತೆ ಶ್ರೀ ಸ್ವರ್ಣಾಂಬ ದೇವಿಯ ದಿವ್ಯ ಬ್ರಹ್ಮರಥೋತ್ಸವವು ಶುಕ್ರವಾರ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಭಿಜಿನ್ ಲಗ್ನದಲ್ಲಿ ಕನ್ನಿಕಾಪೂಜೆ, ಪುರಸ್ಸರ ಕಲ್ಯಾಣೋತ್ಸವದ ನಂತರ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಸಾವಿರಾರು ಭಕ್ತರು ಹರ್ಷೋದ್ಗಾರ ಮಾಡುತ್ತ ರಥ ಎಳೆದು ಸಂಭ್ರಮಿಸಿದರು.
ಹರಕೆಯನ್ನು ಹೊತ್ತ ಮಹಿಳೆಯರು, ಮಕ್ಕಳು ರಥದ ಮುಂದೆ ಉರುಳು ಸೇವೆಯನ್ನು ನಡೆಸುತ್ತಿದ್ದರೆ, ಯುವಕರು ಒಬ್ಬರಿಗೊಬ್ಬರು ಕುಂಕುಮ ಎರಚಾಡುತ್ತಾ ಸಂಭ್ರಮಿಸುತ್ತಿದ್ದ ದೃಶ್ಯ ಮನಮೋಹಕವಾಗಿ ಕಾಣಿಸುತ್ತಿತ್ತು. ಬಾಳೆಹಣ್ಣು, ತೆಂಗಿನಕಾಯಿ ಮತ್ತು ಕುಂಕುಮ, ಅರಿಶಿಣವನ್ನು ದೇವರ ಮೇಲೆ ಎರಚುತ್ತಿದ್ದರು. ಪಕ್ಕದ ಗ್ರಾಮಗಳ ದೇವತೆಗಳ ವಿಗ್ರಹಗಳನ್ನು ತೇರಿನ ಮುಂದೆ ತಂದು ಪೂಜೆ ಸಲ್ಲಿಸುತ್ತಿದ್ದರು.
ಚಿಕ್ಕಮಗಳೂರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಗುರುವಾರವೇ ಬಂದು ಸೇರಿದ್ದ ಸಾವಿರಾರು ಭಕ್ತರಿಗೆ ಅನ್ನದಾಸೋಹವನ್ನು ಕ್ಷೇತ್ರದ ಆಡಳಿತ ಮಂಡಳಿ ಏರ್ಪಡಿಸಿತ್ತು.