ಕೋಲಾರ: ಜಿಲ್ಲೆಯ ಎಲ್ಲ ಶಿವ ದೇವಾಲಯಗಳಲ್ಲಿ ಕಾರ್ತೀಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ನಗರದ ಹೊರವಲಯದಲ್ಲಿರುವ ಅಂತರಗಂಗೆ ಬೆಟ್ಟದಲ್ಲಿ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ನಡೆದ ವಿಶೇಷ ಪೂಜೆ ಮತ್ತು ಜಾತ್ರೆಗೆ ಜಿಲ್ಲೆಯ ಎಲ್ಲೆಡೆಯಿಂದ ಭಕ್ತರು ಸಾಗರೋಪಾದಿಯಲ್ಲಿ ಬಂದರು. ನಗರದ ಅಂತರಗಂಗೆ ರಸ್ತೆಯು ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ಭಕ್ತರಿಂದ ತುಂಬಿಹೋಗಿತ್ತು.
ಬೆಟ್ಟದಲ್ಲಿರುವ ವಿಶ್ವೇಶ್ವರಯ್ಯ ದೇವಾಲಯ, ಪಂಚಲಿಂಗಗಳಿಗೆ ವಿಶೇಷ ಅಲಂಕಾರ, ಪೂಜೆಯ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದ ಹೊರ ಆವರಣದಲ್ಲಿರುವ ಬಸವನ ಮಂಟಪ, ಗಣೇಶ ಗುಡಿಗಳಲ್ಲೂ ನೂರಾರು ಭಕ್ತರು ಪೂಜೆ ಸಲ್ಲಿಸಿದರು. ಜಿಲ್ಲೆಯವರಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಭಕ್ತರೂ ಭೇಟಿ ನೀಡಿದ್ದರು.
ಉಚಿತ ಬಸ್ ವ್ಯವಸ್ಥೆ: ಅಂತರಗಂಗೆಯ ಕಾಶಿ ವಿಶ್ವೇಶ್ವರ ಸ್ವಾಮಿ ಸನ್ನಿಧಿಗೆ ಹೋಗಿ ಬರಲು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಿದ್ದ ಉಚಿತ ವಾಹನ ವ್ಯವಸ್ಥೆಗೆ ಮುಖಂಡ ಡಿ.ಆರ್.ನಾಗರಾಜ್ ಚಾಲನೆ ನೀಡಿದರು. ಬಾಲಾಜಿ, ಜಿಲ್ಲಾ ಸಂಚಾಲಕ ಬಾಬು, ಅಪ್ಪಿಆನಂದ್, ಕೆ.ಎಸ್.ರಾಜೇಂದ್ರ, ವಿಶ್ವನಾಥ್, ರವಿ, ಚಿನ್ನಪ್ಪಿ, ಅಮರ್, ಲೋಕೇಶ್, ಜಗ್ಗ, ಭರತ್, ಶಿವರಾಜ್, ಮುರಳಿ, ನವೀನ್,ರಾಜೇಶ್, ಚಂದ್ರ, ನರೇಶ್,ಶ್ರೀಧರ್, ರೆಡ್ಡಿ, ಶಬರೀಷ್, ಕೆಂಬೋಡಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು. 25 ಟೆಂಪೋ ಮತ್ತು ಬಸ್ಸುಗಳಲ್ಲಿ ಭಕ್ತರು ಸಂಚರಿಸಿದರು.
ವಾಹನ ಸೌಕರ್ಯದ ಆರಂಭದ ಸ್ಥಳವಾದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಕೇಸರಿ ಬಾವುಟಗಳನ್ನು ಹಾಕಲಾಗಿತ್ತು.
ನಗರದ ದೊಡ್ಡಪೇಟೆಯ ನಂಜುಂಡೇಶ್ವರ ದೇವಾಲಯ, ಕೋಟೆ ಬಡಾವಣೆಯಲ್ಲಿರುವ ನಂಜುಂಡೇಶ್ವರ ದೇವಾಲಯ, ಕಾಳಮ್ಮ ಗುಡಿ ಬೀದಿಯ-ಲ್ಲಿರುವ ಕಮ್ಮಟೇಶ್ವರ ದೇವಾಲಯ, ಶಿವಗಿರಿ ಮಠದಲ್ಲಿ ವಿಶೇಷ ಅಲಂಕಾರ, ಪೂಜೆಯನ್ನು ಏರ್ಪಡಿಸಲಾಗಿತ್ತು.