ರಾಮದುರ್ಗ: ಲಯನ್ಸ್ ಸಂಸ್ಥೆಯು ಬಡ ಜನರಿಗಾಗಿ ಮಹೋನ್ನತ ಕಾರ್ಯವನ್ನು ಕೈಗೊಂಡಿದೆ. ಲಯನ್ಸ್ ಕಣ್ಣಿನ ಆಸ್ಪತ್ರೆ ಕಟ್ಟಡಕ್ಕಾಗಿ ರೂ. 10 ಲಕ್ಷ ನೀಡುವುದಾಗಿ ಶಾಸಕ ಅಶೋಕ ಪಟ್ಟಣ ಘೊಷಿಸಿದರು.
ಪಟ್ಟಣದಲ್ಲಿ ನಿರ್ಮಿಸಿರುವ ಕಣ್ಣಿನ ಆಸ್ಪತ್ರೆ ಪ್ರಥಮ ಹಂತದ ಕಟ್ಟಡ ಕಾಮಗಾರಿಯ ಮೊದಲ ಹಂತದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅವರು ಕಣ್ಣಿನ ಆಸ್ಪತ್ರೆಯು ಶೀಘ್ರ ದಲ್ಲಿಯೇ ಸೇವೆಯನ್ನು ಪ್ರಾರಂಭಿಸಲಿ ಎಂದು ಅವರು ಹಾರೈಸಿದರು.
ಸ್ಥಳೀಯ ಲಯನ್ಸ್ ಸಂಸ್ಥೆಯು ಗ್ರಾಮೀಣ ಜನರಿಗಾಗಿ ನಿರ್ಮಿಸುತ್ತಿ ರುವ ಪ್ಯಾರಿಭಾಯಿ ಮೋತಿಲಾಲ ಪಾಲರೇಶಾ ಲಯನ್ಸ್ ಕಣ್ಣಿನ ಆಸ್ಪತ್ರೆ ನಿರ್ಮಾಣ ಎಲ್ಲರಿಗೂ ಖುಷಿ ತಂದಿದೆ.ಶೀಘ್ರವೇ ಅದು ಬಡವರಿಗೆ ಸಿಗಲಿದೆ ಅಂತರ ರಾಷ್ಟ್ರೀಯ ಲಯನ್ಸ್ ಸಂಸ್ಥೆಯ ನಿರ್ದೇಶಕ ವಿ. ವಿ. ಕೃಷ್ಣಾರಡ್ಡಿ ಹೇಳಿದರು.
ಅವಕಾಶಗಳನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಬಳಸಿದೇ ಸಾಮಾಜಿಕ ಒಳಿತಿಗಾಗಿ ಬಳಸಿ ಕೊಳ್ಳಬೇಕೆಂದು ತಾಂತ್ರಿಕ ಸಲಹೆಗಾರ ಡಾ. ಚಂದ್ರಶೇಖರ ಶೆಟ್ಟಿ ಹೇಳಿದರು.ನಮ್ಮ ದೇಶದಲ್ಲಿ ಹಣದ ಕೊರತೆ ಇಲ್ಲ. ಹಣ ನೀಡುವ ಮನೋಭಾವದ ಕೊರತೆ ಇದೆ. ಈ ನಿಟ್ಟಿನಲ್ಲಿ ನಾವು ಬದುಕಿ ಇತರರನ್ನು ಬದುಕಿಸಬೇಕೆಂದು ಜಿಲ್ಲಾ ಉಪರಾಜ್ಯಪಾಲ ಕೃಷ್ಣರಾಜ ಪುನಜಿ ನುಡಿದರು.
ಆಸ್ಪತ್ರೆ ಕಟ್ಟಡಕ್ಕಾಗಿ ಭೂಮಿ ದಾನ ಮಾಡಿದ ದಾನಿಗಳ ಕುಟುಂಬದ ವರನ್ನು ಸಂಸ್ಥೆಯು ಕಾರ್ಯಕ್ರಮದಲ್ಲಿ ಸನ್ಮಾನಿಸಿತು.ಸ್ಥಳೀಯ ಲಯನ್ಸ್ ಅಧ್ಯಕ್ಷ ವಿಜಯಕುಮಾರ ದಿಂಡವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಡಾ. ಸಿ.ಜಿ. ಅಗಡಿ, ಪ್ರೊ. ಸಿ.ಬಿ. ನರಗುಂದ, ಸುರೇಶ ಗುದಗನವರ ಹಾಜರಿದ್ದರು.ಡಾ. ಎಸ್. ಎಸ್. ಕುಲಕರ್ಣಿ ಸ್ವಾಗತಿಸಿದರು. ಪ್ರೊ. ರಾಜಶ್ರೀ ಗುದಗನವರ ಕಾರ್ಯಕ್ರಮ ನಿರೂಪಿಸಿದರು. ಜಯಂತ ಪಾಲರೇಶಾ ವಂದಿಸಿದರು.