ಬೆಂಗಳೂರು: ಕಣ್ಣು ಹಾಯಿಸಿದಲ್ಲೆಲ್ಲ ಕಡಲೆಕಾಯಿ ರಾಶಿ, ದೊಡ್ಡ ಬಸವಣ್ಣನಿಗೆ ನೈವೇದ್ಯ ಮಾಡಿದ ಕಡಲೆಕಾಯಿ ಪ್ರಸಾದ ಕೊಳ್ಳಲು ಮುಗಿ ಬಿದ್ದ ಭಕ್ತರು, ಕಡಲೆಕಾಯಿ ಕೊಳ್ಳಲು ಬಂದ ಜನ ಸಾಗರ... ನಗರದ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಬಳಿ ಸೋಮವಾರದಿಂದ ಆರಂಭಗೊಂಡ ಕಡಲೆಕಾಯಿ ಪರಿಷೆಯಲ್ಲಿ ಕಂಡುಬಂದ ನೋಟವಿದು. ಬಸವನಗುಡಿ ಬೀದಿ ಬೀದಿಗಳಲ್ಲಿ ಪರಿಷೆಯ ಸಂಭ್ರಮ ಮನೆ ಮಾಡಿತ್ತು.
ನಗರದ ಅಕ್ಕಪಕ್ಕದ ಊರುಗಳಿಂದ ಕಡಲೆಕಾಯಿ ತಂದಿದ್ದ ಮಾರಾಟಗಾರರು ಮಾರಾಟದ ಭರಾಟೆಯಲ್ಲಿದ್ದರೆ, ಕಡಲೆಕಾಯಿ ಕೊಳ್ಳುವ ಸಂಭ್ರಮ ಜನರದ್ದು. ಬೆಲೆಯ ಬಗ್ಗೆ ತಲೆಕೆಡಿಸಿಕೊಳ್ಳದ ಭಕ್ತರು ಕಡಲೆಕಾಯಿಕೊಳ್ಳುವ ಧಾವಂತದಲ್ಲಿ ಇದ್ದರು. ‘ಚಿಕ್ಕಂದಿನಿಂದಲೂ ಕಡಲೆಕಾಯಿ ಪರಿಷೆಗೆ ತಪ್ಪದೆ ಬರುತ್ತಿದ್ದೇನೆ. ನಾನು ಮೊದಲು ಪರಿಷೆಯಲ್ಲಿ ಕಡಲೆಕಾಯಿ ಕೊಂಡಾಗ ಸೇರಿಗೆ ತುಂಬಾ ಕಡಿಮೆ ಹಣವಿತ್ತು.
ಆದರೆ, ಮೂವತ್ತು ವರ್ಷದ ಬಳಿಕ ಸೇರು ಕಡಲೆಕಾಯಿ ಬೆಲೆ ಅತಿ ಹೆಚ್ಚಾಗಿದೆ. ಕಡಲೆಕಾಯಿ ಕೊಳ್ಳುವುದು, ತಿನ್ನುವುದು ಮುಖ್ಯವಲ್ಲ. ಆದರೆ, ಈ ಸಡಗರ ನೋಡುವುದೇ ಒಂದು ಭಾಗ್ಯ. ಪಾಶ್ಚಾತ್ಯರ ಪ್ರಭಾವ ನಗರದ ಮೇಲಾಗುತ್ತಿದ್ದರೂ ಇಂತಹ ಪರಿಷೆಗಳಿಂದ ನಮ್ಮತನ ಉಳಿದಿದೆ ಎನಿಸುತ್ತದೆ’ ಎಂದು ಗಿರಿನಗರದ ವೆಂಕಟೇಶಾಚಾರ್ ಹೇಳಿದರು.
‘ಪ್ರತಿ ವರ್ಷವೂ ಕಡಲೆಕಾಯಿ ಮಾರಾಟಕ್ಕೆ ಇಲ್ಲಿ ಬರುತ್ತೇನೆ. ಈ ಬಾರಿ ಹತ್ತು ಚೀಲ ಕಡಲೆಕಾಯಿಗಳನ್ನು ತಂದಿದ್ದೆ. ಅದರಲ್ಲಿ ಈಗಾಗಲೇ ಏಳು ಚೀಲಗಳು ಖಾಲಿಯಾಗಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಮಾರಾಟ ಭರ್ಜರಿಯಾಗಿದೆ’ ಎಂದು ಆನೇಕಲ್ ರೈತ ಗಿರಿಯಪ್ಪ ಸಂತಸ ವ್ಯಕ್ತಪಡಿಸಿದರು. ಕಡಲೆಕಾಯಿ ಪರಿಷೆಯಷ್ಟೇ ಅಲ್ಲ: ಇಲ್ಲಿ ನಡೆಯುವುದು ಬರೀ ಕಡಲೆಕಾಯಿ ಪರಿಷೆಯಷ್ಟೇ ಅಲ್ಲ. ಅಲ್ಲಿ ಜಾತ್ರೆಯ ಸಂಭ್ರಮವೂ ಇತ್ತು. ಸೆಣಬಿನ ಕಸೂತಿ ಬ್ಯಾಗುಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ತಯಾರಿಸಿದ ಸರಸ್ವತಿ, ಗಣಪತಿ ಮೂರ್ತಿಗಳೂ ಇಲ್ಲಿ ಮಾರಾಟಕ್ಕೆ ಲಭ್ಯವಿದ್ದವು.
ಮಕ್ಕಳಿಗೆ ಇಷ್ಟವಾಗುವ ಬೊಂಬೆಗಳು, ಮಹಿಳೆಯರಿಗೆ ಇಷ್ಟವಾಗುವ ಓಲೆ, ಬಳೆಗಳ ಮಾರಾಟಗಾರರು ಸಹ ಸಂಭ್ರಮದಿಂದ ಭಾಗವಹಿಸಿದ್ದರು. ಕಡಲೆಕಾಯಿ ಪರಿಷೆಗೆ ಮೇಯರ್ ಬಿ.ಎಸ್.ಸತ್ಯನಾರಾಯಣ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.