ಬಂಗಾರಪೇಟೆ: ಜಾನಪದ ಕಾರ್ಯಕ್ರಮ ಪ್ರಿಯರಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ಪಟ್ಟಣದ ಗಾಂಧಿನಗರದಲ್ಲಿ ಏರ್ಪಡಿಸಿದ್ದ ಬೆಂಕಿಯ ಮೇಲೆ ರಾಸುಗಳ ಓಟ ಕಾರ್ಯಕ್ರಮವು ಮುದ ನೀಡಿತ್ತು.
ಜಾನುವಾರಗಳ ಕೊಂಬುಗಳಿಗೆ ಬಳಿದ ಬಣ್ಣ, ಅವುಗಳ ಮೈಗೆಲ್ಲಾ ಸುನ್ನಾರಿಗಳಿಂದ ಅಲಂಕಾರ ಮಾಡಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು. ತಮ್ಮ ಜಾನುವಾರುಗಳಿಗೆ ಅಲಂಕಾರ ಮಾಡುವಲ್ಲಿ ಪೈಪೋಟಿಯೂ ಜೋರಾಗಿ ನಡೆದಿತ್ತು.
ಅದನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದ ಬಹಳಷ್ಟು ಜನ ಅವುಗಳಿಗೆ ಬಣ್ಣದ ಹೊದಿಕೆಗಳನ್ನು, ವರ್ತರೇಕುಗಳನ್ನು ಕಟ್ಟಿ ಮೆರೆಸಿದ್ದರು. ಮೆರವಣಿಗೆ ಮುಗಿಸಿ ಬರುವಷ್ಟರಲ್ಲಿ ಬೆಂಕಿ ಹಾಯಿಸುವ ಸ್ಥಳದಲ್ಲಿ ಬಾರಿ ಜನಸ್ತೋಮವೂ ಸೇರಿತ್ತು. ಹರಿಶಿಣ ನೀರನ್ನು ಜಾನುವಾರಗಳ ಮೇಲೆರೆಚಿ ಅವರನ್ನು ಬೆಂಕಿಯ ಮೇಲೆ ಹಾಯಿಸಿದರು.
ಅವು ಬೆದರಿ ಓಡುವುದು, ಜನರ ಮೇಲೆ ನುಗ್ಗುವುದು, ಅವನ್ನು ಪಕ್ಕದಲ್ಲಿಯೇ ನಿಂತ ಯುವಕರು ನಿಯಂತ್ರಿಸುವುದು ನೋಡುವವರನ್ನು ರೋಮಾಂಚನಗೊಳಿಸಿತು.