ಹಳೇಬೀಡು: ವಿದೇಶಗಳಲ್ಲಿ ಭವ್ಯವಾದ ಹಿಂದೂ ದೇವಾಲಯ ನಿರ್ಮಿಸಿ, ವೈಭವದಿಂದ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಭಾರತದಲ್ಲಿ ಮಾತ್ರ ಭಕ್ತಿ ಭಾವನೆ ನಶಿಸುತ್ತಿದೆ ಎಂದು ಶಾಸಕ ವೈ.ಎನ್.ರುದ್ರೇಶ್ಗೌಡ ವಿಷಾದಿಸಿದರು.
ಹಳೇಬೀಡಿನ ಪುಷ್ಪಗಿರಿಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತು ಆಶ್ರಯದಲ್ಲಿ ಮಂಗಳವಾರ ನಡೆದ ಮುಜಾರಾಯಿ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತಹಶೀಲ್ದಾರ್ ಎನ್.ಎಸ್.ಚಿದಾನಂದ ಮಾತನಾಡಿ, ದೇವಾಲಯ ಜೀರ್ಣೋದ್ಧಾರ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯವರು ಗ್ರಾಮದ ಜನರೊಂದಿಗೆ ಒಗ್ಗೂಡಿ ಮುಜಾರಾಯಿ ಇಲಾಖೆಯ ಅನುಮತಿ ಪಡೆಯಬೇಕು. ಪ್ರಾಚೀನ ದೇವಾಲಯದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ದೇವಾಲಯ ನವೀಕರಣ ಮಾಡಬೇಕು ಎಂದು ಸಲಹೆ ಮಾಡಿದರು. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಎಸ್.ಸೋಮಶೇಖರ್, ಸಂಸ್ಕೃತ ಉಪನ್ಯಾಸಕ ವಿಶ್ವನಾಥ ಶರ್ಮ, ಬೇಲೂರು ಬ್ರಾಹ್ಮಣ ಮಹಸಭಾ ಅಧ್ಯಕ್ಷ ಮಂಜುನಾಥ್, ಧಾರ್ಮಿಕ ಪರಿಷತ್ತು ಸದಸ್ಯರಾದ ಸುಬ್ರಹ್ಮಣ್ಯ, ಅನಂತರಾಮ ಭಟ್, ಕೆ.ಕೆ.ರಾಮೇಗೌಡ, ಹಾರ್ನಳ್ಳಿ ಸಿದ್ದಪ್ಪ, ಕೆ.ಪಾಂಡುರಂಗ, ಡಿ.ಮಮತ ಮಂಜುನಾಥ ಇತರರು ಇದ್ದರು.