ಭದ್ರಾವತಿ (ಶಿವಮೊಗ್ಗ ಜಿಲ್ಲೆ): ಇಲ್ಲಿನ ಅರಳಿಹಳ್ಳಿ ಗ್ರಾಮದಲ್ಲಿ ನಲ್ಲಮ್ಮ (73) ಎಂಬ ವೃದ್ಧೆಯನ್ನು ಕತ್ತು ಹಿಸುಕಿ ಸಾಯಿಸಿ, ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.
ಹಲವು ವರ್ಷದಿಂದ ನಲ್ಲಮ್ಮ ಒಂಟಿಯಾಗಿ ವಾಸಿಸುತ್ತಿದ್ದಾರೆ. ಅವರ ಮಕ್ಕಳು ಭದ್ರಾವತಿ ನಗರದಲ್ಲಿದ್ದಾರೆ. ರಾತ್ರಿ ಮಲಗಿದ್ದ ಸಮಯದಲ್ಲಿ ಈ ಕೃತ್ಯ ನಡೆದಿದೆ. ಮೈಮೇಲಿದ್ದ ಸರ, ಬಳೆಗಳನ್ನು ಅಪಹರಿಸಲಾಗಿದೆ.
ಬೆಳಿಗ್ಗೆ ನಲ್ಲಮ್ಮ ಹೊರ ಬಾರದಿರುವುದನ್ನು ಕಂಡ ಪಕ್ಕದ ಮನೆಯ ಕಾಳಿಯಮ್ಮ ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ಭೇಟಿ ನೀಡಿದ್ದರು.