ಬೆಂಗಳೂರು: ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಯ ನಿವೃತ್ತ ಅಧಿಕಾರಿ ಹಾಗೂ ಕಥೆಗಾರ, ಕವಿ ಬಿ. ರಾಜಣ್ಣ (೬೫) ಶನಿವಾರ ಇಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
ಅಂತ್ಯಕ್ರಿಯೆ ಭಾನುವಾರ (ಡಿ. 22) ಅವರ ಹುಟ್ಟೂರು ಕೆ.ಆರ್.ನಗರ ತಾಲ್ಲೂಕು ಸಾಲಿಗ್ರಾಮ ಸಮೀಪದ ರಾಂಪುರದಲ್ಲಿ ನಡೆಯಲಿದೆ.
ಶಿಗ್ಗಾವಿ ಸಮೀಪದ ಜಾನಪದ ವಿಶ್ವವಿದ್ಯಾಲಯದ ‘ಜಾನಪದ ನುಡಿ ಕೋಶ’ದ ಸಂಪಾದಕೀಯ ಬಳಗದಲ್ಲಿ ಸಹಾಯಕ ಸಂಪಾದಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು.
ಅವರು ಗ್ರಾಮೀಣ ಸೊಗಡಿನ ವಿಶಿಷ್ಟ ಸಂವೇದನೆಯ ಲೇಖಕ.
ಮೂರು ಕಥಾ ಸಂಕಲನಗಳು ಮತ್ತು ಒಂದು ಕಾವ್ಯ ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದರು.