ನ್ಯಾಮತಿ: ಕನಕ ಗುರುಪೀಠ ಒಬ್ಬ ಮಹಾನ್ ಪುರುಷನ ಹೆಸರಿನಲ್ಲಿ ಸ್ಥಾಪಿತವಾಗಿದೆಯೇ ಹೊರತು ಒಂದು ಜಾತಿಗೆ ಸೀಮಿತವಾಗಿಲ್ಲ ಎಂದು ಕನಕಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಹೊನ್ನಾಳಿ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ‘ಮುತ್ತು ಬಂದಿದೆ ಊರಿಗೆ’ ಹಾಗೂ ಗ್ರಾಮ ದರ್ಶನ ಕಾರ್ಯಕ್ರಮವನ್ನು ಕೋಣನತಲೆ ಗ್ರಾಮದಲ್ಲಿ ಧರ್ಮಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಮಠಾಧೀಶರು ಇಡೀ ಮನುಕುಲದ ಹಿತ ಬಯಸುವ ಬದಲು ತಮ್ಮ ಜಾತಿ, ಜನ, ಪಂಗಡಗಳ ಹಿತರಕ್ಷಣೆಗೆ ಮುಂದಾಗಿರುವುದು ವಿಷಾದದ ಸಂಗತಿ, ಮಠಾಧೀಶರು ಎಲ್ಲಾ ಸಮಾಜಗಳ ಹಿತವನ್ನು ಕಾಯಬೇಕು ಎಂದರು.
ಕಳೆದ ನಾಲ್ಕು ವರ್ಷಗಳಿಂದ ಗ್ರಾಮದರ್ಶನ ಕಾರ್ಯಕ್ರಮದ ಅಡಿಯಲ್ಲಿ ಜನರಿಂದ ಭಕ್ತಿಯ ರೂಪದಲ್ಲಿ ಸಂಗ್ರಹಿಸಲಾದ ಧನ, ದವಸ- ಧಾನ್ಯವನ್ನು ಸಮಾಜಮುಖಿ ಕಾರ್ಯಕ್ರಮಕ್ಕೆ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಣನತಲೆ ಗ್ರಾಮಸ್ಥರು ್ಙ 17ಸಾವಿರ ದೇಣಿಗೆ ಸಮರ್ಪಿಸಿದರು ಕಲ್ಲರಹಳ್ಳಿ ಮಂಜುನಾಥ್, ಬಿ.ಎನ್. ವೆಂಕಟೇಶ್, ಬಸವರಾಜಪ್ಪ, ಶಾಂತರಾಜ್, ಬಿಸಾಟಿ ಪುರುಷೋತ್ತಮ, ಬಿ. ಸಿದ್ದಪ್ಪ, ಕುಬೇರಪ್ಪ, ಸತ್ತಿಗೆ ಲೋಕೇಶ್, ಈಶ್ವರಪ್ಪ ಕೆ.ವಿ. ಚನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.