ಬಳ್ಳಾರಿ: ಬೆಳಕು ಹರಿಯಲಾರಂಭಿಸಿದಂತೆ ನಗರದತ್ತ ಹರಿದು ಬರಲಾರಂಭಿಸಿದ ಭಕ್ತಸಾಗರ, ಮುಸ್ಸಂಜೆಯವರೆಗೂ ಶ್ರದ್ಧೆಯಿಂದ ಕಾದು, ನಗರದ ಆರಾಧ್ಯದೈವವಾದ ಕನಕ ದುರ್ಗಮ್ಮನ ಸಿಡಿಬಂಡಿ ರಥೋತ್ಸವಕ್ಕೆ ಸಾಕ್ಷಿಯಾಯಿತು.
ಪ್ರತಿ ವರ್ಷದಂತೆ ಮಂಗಳವಾರ ಸಂಜೆ ನಡೆದ ರಥೋತ್ಸವವು, ದೇವಸ್ಥಾನವನ್ನು ಎರಡು ಸುತ್ತು ಸುತ್ತುತ್ತಿದ್ದಂತೆಯೇ ದರ್ಶನ ಭಾಗ್ಯ ಪಡೆದ ಭಕ್ತಗಣ, ದುರ್ಗಮ್ಮನ ಕೃಪೆಗೆ ಪಾತ್ರವಾಗಿ, ಶರಣು ಹೇಳಿತು.
ನಗರದ ಹೃದಯ ಭಾಗದಲ್ಲಿರುವ ಕನಕ ದುರ್ಗಮ್ಮನ ದೇವಸ್ಥಾನದೆದುರು ಬೆಳಿಗ್ಗೆಯಿಂದಲೇ ಜಾತ್ರೆಯ ರಂಗು ಕಳೆ ಕಟ್ಟಿತ್ತು. ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು, ಹಣ್ಣು-ಕಾಯಿ ಮಾಡಿಸಿ, ದೇವಿಯ ದರ್ಶನ ಪಡೆದ ಭಕ್ತರು, ನಂತರ ಅಲ್ಲೇ ಸಿಹಿಯೂಟ ಸವಿದು, ಸಂಜೆಯ ವೇಳೆ ನಡೆದ ಸಿಡಿಬಂಡಿ ರಥೋತ್ಸವದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಾಗ ಅವರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಜಾತ್ರೆಯ ಅಂಗವಾಗಿ ಆಗಮಿಸಿದ್ದ ಭಕ್ತಸಮೂಹಕ್ಕೆ ಸಚಿವ ಶ್ರೀರಾಮುಲು ಹಾಗೂ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಇದೇ ಮೊದಲ ಬಾರಿಗೆ ಎರಡು ದಿನಗಳ ಕಾಲ ಉಚಿತ ಪ್ರಸಾದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿದ್ದು, ವಿವಿಧ ಸಂಘಟನೆಗಳು ಭಕ್ತರಿಗೆ ಅನುಕೂಲ ಕಲ್ಪಿಸಲು ಉಚಿತ ಮಜ್ಜಿಗೆ ಪೂರೈಕೆ ವ್ಯವಸ್ಥೆಯನ್ನೂ ಕಲ್ಪಿಸಿದ್ದವು.