ಕನಕಪುರ: ‘ಪಟ್ಟಣದ ಸರ್ವೆ ನಂಬರ್ 505ರಲ್ಲಿರುವ ಪೇಟೆಕೆರೆಯನ್ನು ಕೆರೆ ಯಾಗಿಯೇ ಉಳಿಸುವಂತೆ ರಾಜ್ಯ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದ್ದರೂ ಕೆಲವು ಪ್ರಭಾವಿಗಳು ದುರುದ್ದೇಶದಿಂದ ಕೆರೆಯನ್ನು ಅತಿಕ್ರಮವಾಗಿ ಮುಚ್ಚಿ ನ್ಯಾಯಾಲದ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ’ ಎಂದು ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಕೆರೆ ಉಳಿಸಲು ಹೋರಾಟ ನಡೆಸುತ್ತಿರುವ ಸಂಘದ ಸಂಪತ್ಕುಮಾರ್, ಎಂ.ಮಧುಗೌಡ, ಕೆ.ಎಸ್. ಅನಂತ್ರಾಂಪ್ರಸಾದ್, ಎಂ.ಮಧುಗೌಡ ಮೊದ ಲಾದವರು ಕೆರೆ ಮುಚ್ಚುತ್ತಿರುವುದನ್ನು ತಡೆಗಟ್ಟುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಅವರು ಶಾಶ್ವತ ಹೋರಾಟ ಸಮಿತಿಯ ಅಧ್ಯಕ್ಷರಿಗೆ ಮನವಿ ಪತ್ರ ನೀಡಿ ಕೆರೆಯನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.
‘ಪೇಟೆಕೆರೆಯನ್ನು ಮುಚ್ಚಲು ಮುಂದಾದಾಗ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಂಪತ್ ಕುಮಾರ್ ನ್ಯಾಯಾಲಯದಲ್ಲಿ ಸಾರ್ವ ಜನಿಕ ಹಿತಾಸಕ್ತಿ ಸಲ್ಲಿಸಿ ಕೆರೆಯನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡದೆ ಕೆರೆಯಾಗಿಯೇ ಉಳಿಸುವಂತೆ ಮನವಿ ಮಾಡಿದ್ದರು. ಅದರಂತೆ ನ್ಯಾಯಾಲಯವು ಕೆರೆಯನ್ನು ಮುಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಅಂತರ್ಜಲ ವೃದ್ಧಿಗಾಗಿ ಕೆರೆಯನ್ನು ಕೆರೆಯಾಗಿಯೇ ಉಳಿಸಿ ಅಭಿವೃದ್ಧಿಪಡಿಸಬೇಕು ಎಂದು ಆದೇಶಿಸಿತ್ತು.
ಆದರೆ ಸಂಬಂಧಪಟ್ಟವರು ನ್ಯಾಯಾಲಯದ ಆದೇಶವನ್ನು ಗಂಭೀರವಾಗಿ ಪರಿಗಣಿಸದೆ ಸಂಪೂರ್ಣ ವಾಗಿ ನಿರ್ಲಕ್ಷಿಸಿದ್ದಾರೆ. ಪ್ರಭಾವಿ ವ್ಯಕ್ತಿಗಳು ಈ ಕೆರೆಯನ್ನು ಮುಚ್ಚುತ್ತಿದ್ದು ಕಲ್ಲುಗಣಿಗಾರಿಕೆಯ ಹಾಗೂ ಕೋಳಿ ಅಂಗಡಿಗಳ ತ್ಯಾಜ್ಯ ಸೇರಿದಂತೆ ಗೃಹ ನಿರ್ಮಾಣದ ತ್ಯಾಜ್ಯವನ್ನು ಕೆರೆಗೆ ತಂದು ಸುರಿಯಲು ಅವಕಾಶ ನೀಡಿದ್ದಾರೆ. ಇದನ್ನು ತಡೆಗಟ್ಟುವಲ್ಲಿ ಪುರಸಭೆ, ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದ್ದಾರೆ.