ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸಂಸತ್ ಸದಸ್ಯೆ ಕನಿಮೊಳಿ ಅವರು ಸಲ್ಲಿಸಿರುವ ಜಾಮೀನು ಕೋರಿಕೆ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುಂವತೆ ಸುಪ್ರಿಂಕೋರ್ಟ್ ಸಿಬಿಐಗೆ ಸೋಮವಾರ ಸೂಚಿಸಿದೆ. ಕಲೆಜ್ಞರ್ ಟಿವಿಗೆ ನೀಡಲಾಗಿದೆ ಎಂದು ಆಪಾದಿಸಲಾದ 200 ಕೋಟಿ ರೂಪಾಯಿಗಳ ಹಾಲಿ ಸ್ಥಿತಿಗತಿ ಏನು ಎಂದೂ ಸುಪ್ರೀಂಕೋರ್ಟ್ ತಿಳಿಯಬಯಸಿದೆ.
ಭ್ರಷ್ಟಾಚಾರವು ‘ಮಾನವ ಹಕ್ಕುಗಳ ಉಲ್ಲಂಘನೆಯ’ ಅತ್ಯಂತ ಕೆಟ್ಟ ವಿಧಾನ ಎಂದು ಬಣ್ಣಿಸಿದ ಸುಪ್ರೀಂಕೋರ್ಟ್, ರಾಜಾ ಅವರು ದೂರಸಂಪರ್ಕ ಸಚಿವರಾಗಿದ್ದ ಅವಧಿಯಲ್ಲಿ ಟೆಲಿಕಾಂ ಆಪರೇಟರ್ಗಳಿಗೆ ಪರವಾನಗಿಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಬೊಕ್ಕಸಕ್ಕೆ ಆಗಿರುವ ನಷ್ಟದ ಅಂದಾಜು ಮಾಡುವಂತೆಯೂ ನ್ಯಾಯಾಲಯ ಸಿಬಿಐಗೆ ಸೂಚನೆ ನೀಡಿತು.
ನ್ಯಾಯ ಮೂರ್ತಿಗಳಾದ ಬಿ.ಎಸ್. ಚೌಹಾಣ್ ಮತ್ತು ಸ್ವತಂತ್ರಕುಮಾರ್ ಅವರನ್ನು ಒಳಗೊಂಡ ಪೀಠವು, ವಿಶೇಷ ನ್ಯಾಯಾಲಯದ ಮುಂದಿರುವ 2 ಜಿ ತರಂಗಾಂತರ ಪ್ರಕರಣದ ತನಿಖೆಯ ಸ್ಥಿತಿಗತಿ ಏನು ಎಂಬ ಬಗ್ಗೆ ಮಾಹಿತಿ ನೀಡುವಂತೆಯೂ ತನಿಖಾ ಸಂಸ್ಥೆಗೆ ಸೂಚಿಸಿತು.
ಕನಿಮೊಳಿ ಮತ್ತು ಕಲೈಜ್ಞರ್ ಟಿವಿಯ ಆಡಳಿತ ನಿರ್ದೇಶಕ ಶರದ್ ಕುಮಾರ್ ಅವರ ಜಾಮೀನು ಕೋರಿಕೆ ಅರ್ಜಿ ಸಂಬಂಧ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಲು ಸಿಬಿಐಗೆ ಒಂದು ವಾರದ ಕಾಲಾವಕಾಶವನ್ನೂ ನ್ಯಾಯಾಲಯ ನೀಡಿತು.