ಹಾಸನ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ಕೂಲಿಯನ್ನೂ ನೀಡದೆ ತಾವೇ ಮಾಡಿರುವ ಕಾನೂನನ್ನು ಉಲ್ಲಂಘಿ ಸುತ್ತಿವೆ. ರಾಜ್ಯದಲ್ಲಿ ಶೇ 80ರಷ್ಟು ಕೂಲಿ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ದುಡಿಸಿ ಕೊಳ್ಳಲಾ ಗುತ್ತಿದೆ ಎಂದು ಈಚೆಗೆ ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ’ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯ ದರ್ಶಿ ಸಯ್ಯದ್ ಮುಜೀಬ್ ನುಡಿ ದರು. ಹಾಸನದಲ್ಲಿ ಮಂಗಳವಾರ ಆಯೋಜಿಸಿದ್ದ ಗುತ್ತಿಗೆ ಪೌರ ಕಾರ್ಮಿಕರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪ್ರಧಾನ ಭಾಷಣ ಕಾರರಾಗಿ ಅವರು ಮಾತನಾಡಿದರು.
‘ರಾಜ್ಯದಲ್ಲಿ 21 ಸಾವಿರಕ್ಕೂ ಹೆಚ್ಚು ಮಂದಿ ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಈ ಕಾರ್ಮಿಕರಿಗೆ ಅನ್ಯಾಯವಾಗಬಾರದೆಂಬ ಉದ್ದೇಶ ದಿಂದಲೇ ಗುತ್ತಿಗೆ ಕಾರ್ಮಿಕರಿಗೂ ಕಾಯ್ದೆ ರಚಿಸಿ,ಅವರಿಗೂ ಕನಿಷ್ಠ ಕೂಲಿ ನಿಗದಿ ಮಾಡಲಾಗಿದೆ. ಈ ಕೂಲಿ ನೀಡದಿದ್ದರೆ ಗುತ್ತಿಗೆದಾರರು, ಅಥವಾ ಅಧಿಕಾರಿಗಳಿಗೆ ಕನಿಷ್ಟ 6 ತಿಂಗಳು ಸೆರೆವಾಸ ನೀಡಬೇಕು ಎಂಬ ಕಾನೂನು ಇದೆ. ಆದರೆ ಈ ವರೆಗೆ ಯಾವ ಅಧಿಕಾರಿಯೂ ಬಂಧನಕ್ಕೆ ಒಳಗಾಗಿಲ್ಲ. ಬದಲಿಗೆ ಕಾರ್ಮಿಕರ ಕಾನೂನನ್ನು ಜಾರಿ ಮಾಡಿ ಎಂದು ಒತ್ತಾಯಿಸಿದ ಕಾರ್ಮಿಕರನ್ನೇ ಗುಲ್ಬರ್ಗದಲ್ಲಿ ಜೈಲಿಗೆ ಕಳುಹಿಸಲಾಗಿತ್ತು ಎಂದರು.
‘ಸರ್ಕಾರ ಮಾತ್ರವಲ್ಲ ಸಮಾಜವೂ ಪೌರ ಕಾರ್ಮಿಕರನ್ನು ಕೀಳಾಗಿ ಕಾಣುತ್ತಿದೆ. ಪೌರ ಕಾರ್ಮಿಕರ ಕೆಲಸ ಎಷ್ಟು ಮುಖ್ಯ ಎಂಬುದನ್ನು ಸಮಾಜ ಅರಿತುಕೊಳ್ಳಬೇಕು. ರಾಜ್ಯದಲ್ಲಿ ಹಲವು ಕಾರ್ಮಿಕ ಸಂಘಟನೆಗಳಿದ್ದರೂ ಯಾವುದೇ ಸಂಘಟನೆ ಗುತ್ತಿಗೆ ಕಾರ್ಮಿಕರ ಸಮಸ್ಯೆ ಮೇಲೆ ಬೆಳಕು ಚೆಲ್ಲಲಿಲ್ಲ, ಅವರ ಪರವಾಗಿ ಯಾರೂ ಹೋರಾಟ ಮಾಡಿಲ್ಲ. ಆದರೆ ಅವರನ್ನು ಸಂಘಟಿಸಲು ಮುಂದಾ ದಾಗ ಅನೇಕ ಸಂಘಗಳು ನಮ್ಮ ಮೇಲೆ ದಾಳಿ ನಡೆಸಿವೆ’ ಎಂದು ಮುಜೀಬ್ ನುಡಿದರು.
ಸಮಾವೇಶವನ್ನು ಉದ್ಘಾಟಿಸಿದ ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಸುಕುಮಾರ್, ‘ಬರಿಯ ಘೋಷಣೆಗಳನ್ನು ಕೂಗುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಹೋರಾಟದ ಜತೆಗೆ ಕಾನೂನು ಸಮರವನ್ನೂ ನಡೆಸಬೇಕು. ಇದಕ್ಕೆ ಒಂದು ಸಂಘಟನೆ ಅಗತ್ಯ. ಗುತ್ತಿಗೆ ಕಾರ್ಮಿಕರು ಈಗಲಾದರೂ ಸಂಘಟಿತ ರಾಗುತ್ತಿರುವುದು ಒಳ್ಳೆಯ ಸೂಚನೆ ಎಂದರು.1970ರಲ್ಲೇ ಗುತ್ತಿಗೆ ಕಾರ್ಮಿಕರ ಕಾಯ್ದೆ ಜಾರಿಗೆ ಬಂದಿದೆ. ನಾಲ್ಕು ದಶಕ ಕಳೆದಿದ್ದರೂ ಇಂದಿಗೂ ಆ ಕಾಯ್ದೆ ಜಾರಿಯಾಗಿಲ್ಲ. ಸರ್ಕಾರಗಳೇ ಈ ಕಾಯ್ದೆಯನ್ನು ಉಲ್ಲಂಘಿ ಸಿರುವುದರಿಂದ ಈ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಹೋರಾಟ ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಿಐಟಿಯು ಗುತ್ತಿಗೆ ಕಾರ್ಮಿಕರನ್ನು ಸಂಘಟಿಸಲು ಕೆಲವು ವರ್ಷಗಳಿಂದ ಶ್ರಮಿಸುತ್ತಿದೆ’ ಎಂದರು. ಸಿಐಟಿಯು ಕಾರ್ಯದರ್ಶಿ ಧರ್ಮೇಶ್, ಅಬ್ದುಲ್ ಸಮದ್, ಎಚ್.ಎಸ್. ಬಾಬು, ಪ್ರಕಾಶ್, ಲೋಕೇಶ್, ಸತ್ಯನಾರಾಯಣ, ಪೃಥ್ವಿ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕು ಗಳಿಂದ ಬಂದಿದ್ದ ಪೌರ ಕಾರ್ಮಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮೊದಲು ಪೌರ ಕಾರ್ಮಿಕರು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.