ಕೋಲಾರ: ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿಗೆ ಕನಿಷ್ಠ ಕೂಲಿ ನೀಡುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಮಹಿಳೆಯರು ನಗರದಲ್ಲಿ ಗುರುವಾರ ‘ಜಿಲ್ಲಾ ಪಂಚಾಯಿತಿ ಚಲೋ’ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಹೊರಟ ಮಹಿಳೆಯರು ಎಂ.ಜಿ. ರಸ್ತೆ ಮೂಲಕ ಪಂಚಾಯಿತಿ ತಲುಪಿ ಅಲ್ಲಿ ಧರಣಿ ನಡೆಸಿದರು.ಬಿಸಿಯೂಟ ನೌಕರರಿಗೆ ಕೆಲಸದ ಭದ್ರತೆ ಒದಗಿಸಿ ವಿಶೇಷ ಸೇವಾ ನಿಯಮಾವಳಿ ರಚಿಸಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಿಲ್ಲಬೇಕು. ಪ್ರತಿ ತಿಂಗಳ ಮೊದಲ ವಾರದಲ್ಲೆ ಸಂಬಳ ನೀಡಬೇಕು.ಎಸ್ಡಿಎಂಸಿಗಳಿಂದ ಅಧಿಕಾರ ದುರುಪಯೋಗ ವಾಗುವುದನ್ನು ತಡೆಯಬೇಕು. ಖಾಸಗಿ ಸೇವಾ ಸಂಸ್ಥೆಗಳಿಗೆ ಯೋಜನೆ ಗುತ್ತಿಗೆ ನೀಡಬಾರದು ಎಂದು ಆಗ್ರಹಿಸಿದರು.