ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ವೇತನಕ್ಕೆ ಆಗ್ರಹಿಸಿ ಧರಣಿ

Last Updated 25 ಮೇ 2012, 9:05 IST
ಅಕ್ಷರ ಗಾತ್ರ

ಹುಣಸೂರು: ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆಯನ್ನು ಏಕ ಕಾಲಕ್ಕೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರು ಸಿಪಿಐ (ಎಂ) ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಪುರಸಭೆ ಮೈದಾನದಿಂದ ವಿವಿಧ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ತೆರಳಿದ ಗ್ರಾಮ ಪಂಚಾಯಿತಿ ನೌಕರರು, ಅಧಿಕಾರಿಗಳ ವಿರುದ್ಧ ಘೋಷಣೆ ಹಾಕಿದರು. ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಧರಣಿ ಆರಂಭಿಸಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹದೇವಸ್ವಾಮಿ ಅವರಿಗೆ ಮನವಿ ಪತ್ರ ನೀಡಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಹಬ್ಬನಕುಪ್ಪೆ ಜಗದೀಶ್, ಗೌರವಾಧ್ಯಕ್ಷ ಕಲ್ಕುಣಿಕೆ ಬಸವರಾಜ್ ಮಾತನಾಡಿ,  ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿ 5 ವರ್ಷಗಳು ತುಂಬಿದೆ. ಆದರೆ ಸರ್ಕಾರಗಳು ಬದಲಾಗುತ್ತಿವೆ ಹೊರತು ಪಂಚಾಯಿತಿ ನೌಕರರ ಸಮಸ್ಯೆಗಳ ಮಾತ್ರ ಬದಲಾಗಲಿಲ್ಲ.
 
ಸರ್ಕಾರ ಸರ್ಕಾರಿ ನೌಕರರಿಗೆ ವಾರ್ಷಿಕ ವೇತನ ಹೆಚ್ಚಳ ಮತ್ತು ಡಿ.ಎ. ಹೆಚ್ಚಳ ಮಾಡುತ್ತಿದ್ದರೂ ಇದಾವುದು ಗ್ರಾಮ ಪಂಚಾಯಿತಿ ನೌಕರರಿಗೆ ಅನ್ವಯವಾಗುತ್ತಿಲ್ಲ. ಸರ್ಕಾರಿ ನೌಕರರಲ್ಲೇ ತಾರತಮ್ಯ ಅನುಸರಿಸಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿಗಳು ಅಭಿವೃದ್ಧಿಗೆ ಪ್ರಥಮ ಹಂತವಿದ್ದಂತೆ. ಸರ್ಕಾರ ಎಲ್ಲ ಕೆಲಸ ಮತ್ತು ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಇಲ್ಲಿ ಕರ್ತವ್ಯನಿರ್ವಹಿಸುತ್ತಿರುವ ನೌಕರರಿಗೆ ಕೆಲಸದ ಒತ್ತಡ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ ಸಂಬಳ ಮಾತ್ರ ಇಲ್ಲ ಎಂದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸಂಘದ ಕಾರ್ಯದರ್ಶಿ ತ್ಯಾಗರಾಜು, ಖಜಾಂಚಿ ಲೋಕೇಶ್, ವಿವೇಕ್, ರಾಮಚಂದ್ರ, ತಟ್ಟೆಕೆರೆ ಮಹದೇವ್, ಹನಗೋಡು ಮುನಿಸ್ವಾಮಿ, ಕಲ್ಲಹಳ್ಳಿ ಕುಮಾರ್, ಚಿಲ್ಕುಂದ ಮಹದೇವ ಮತ್ತು ನೌಕರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT