ಶಿವಮೊಗ್ಗ: ಆಶಾ ಕಾರ್ಯಕರ್ತೆ ಯರು ಮತ್ತು ಬಿಸಿಯೂಟ ಕಾರ್ಯ ಕರ್ತೆಯರಿಗೆ ಕನಿಷ್ಠ ಮಾಸಿಕ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರ ಫೆಡರೇಷನ್ ಹಾಗೂ ಅಕ್ಷರ ದಾಸೋಹ ಬಿಸಿ ಯೂಟ ತಯಾರಕರ ಫೆಡರೇಷನ್ ಜಂಟಿಯಾಗಿ ಶನಿವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು.
ಬಿಸಿಯೂಟ ಕಾರ್ಯಕರ್ತೆಯರಿಗೆ ಶ್ರಮಕ್ಕೆ ತಕ್ಕಂತೆ ಕೂಲಿ ಕೊಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ಕನಿಷ್ಠ ವೇತನಕ್ಕಿಂತ ಕಡಿಮೆ ಕೂಲಿ ಕೊಡಲಾಗುತ್ತಿದೆ. ಈ ಶೋಷಣೆ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಮುಖ್ಯ ಅಡುಗೆ ತಯಾರಕರಿಗೆ 1,100 ರೂ. ಹಾಗೂ ಸಹಾಯಕ ರಿಗೆ 1ಸಾವಿರ ರೂ. ಸಂಭಾವನೆ ನೀಡಲಾಗುತ್ತಿದೆ. ಇದರಲ್ಲಿ ಇಡೀ ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣ ಅಸಾಧ್ಯವಾಗಿದೆ ಎಂದು ದೂರಿದರು.
ಭಾರತೀಯ ಕಾರ್ಮಿಕ ಸಂಘಟನೆ ನಿಗದಿಪಡಿಸಿದಂತೆ ಕನಿಷ್ಠ ಕೂಲಿ ಜಾರಿಗೊಳಿಸಬೇಕು. ತಿಂಗಳಿಗೆ ಕನಿಷ್ಠ 3ಸಾವಿರ ರೂ. ಸಂಬಳ, ಸಮವಸ್ತ್ರ ಮತ್ತು ಔಷಧಿ ಕಿಟ್ ನೀಡಬೇಕು ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸಿದರು.
ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿ ಭಟನಾಕಾರರು ಜಿ.ಪಂ. ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪದಾಧಿ ಕಾರಿಗಳಾದ ಅಕ್ಕಮ್ಮ, ಹನುಮಮ್ಮ, ಭಾರತಿ, ವಿಮಲಾಬಾಯಿ ನೇತೃತ್ವ ವಹಿಸಿದ್ದರು.