ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 13 ಜನವರಿ 2012, 10:25 IST
ಅಕ್ಷರ ಗಾತ್ರ

ಯಾದಗಿರಿ:  ನಿಗದಿತ ಕನಿಷ್ಠ ವೇತನ ಪಾವತಿ, ಭವಿಷ್ಯ ನಿಧಿ, ಬಾಕಿ ವೇತನ ಮತ್ತು ಇತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆರೋಗ್ಯ ಇಲಾಖೆ ಸಿ ಮತ್ತು ಡಿ ಗ್ರುಪ್ ಗುತ್ತಿಗೆ ನೌಕರರ ಸಂಘ ಜಿಲ್ಲಾ ಘಟಕದದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿತ್ತು.

ಜಿಲ್ಲಾ ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಲವಾರು ವರ್ಷಗಳಿಂದ ನಾನ್ ಕ್ಲಿನಿಕಲ್ ನೌಕರರು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದು, ಅತ್ಯಲ್ಪ ವೇತನದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಈ ನೌಕರರು ವೇತನ ಮತ್ತು ಸೌಲಭ್ಯಗಳನ್ನು ಪಡೆಯುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಆಸ್ಪತ್ರೆಯಲ್ಲಿ ಸ್ವಚ್ಛತೆ, ಆಸ್ಪತ್ರೆ ನಿರ್ವಹಣೆ, ಆಹಾರ ಪೂರೈಕೆ, ತ್ಯಾಜ್ಯವಸ್ತುಗಳ ನಿರ್ವಹಣೆ, ದೋಬಿ, ಭದ್ರತೆ ಇತ್ಯಾದಿ ಅತ್ಯಗತ್ಯ ಸೇವೆಗಳನ್ನು ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ. ಈ ನೌಕರರಿಗೆ ದುಡಿತಕ್ಕೆ ತಕ್ಕ ಪ್ರತಿಫಲವೇ ಇಲ್ಲದಂತಾಗಿದೆ ಎಂದು ತಿಳಿಸಿದರು.

ಇಲಾಖೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಈ ನೌಕರರಿಗೆ ರೂ. 4158 ಕನಿಷ್ಠ ವೇತನ ನೀಡಬೇಕು. ಆದರೆ ಹೊರಗುತ್ತಿಗೆ ಕಂಪೆನಿಗಳು ಕನಿಷ್ಠ ವೇತನವನ್ನು ನೀಡದೇ ನೌಕರರನ್ನು ವಂಚಿಸುತ್ತಿವೆ. ಬೆಲೆ ಏರಿಕೆ, ದುಬಾರಿ ಶಿಕ್ಷಣ, ಆರೋಗ್ಯದ ದಿನಗಳಲ್ಲಿ ಜೀವನ ನಡೆಸುವುದು ದುಸ್ತರವಾಗಿದ್ದು, ಈ ಕನಿಷ್ಠ ವೇತವನ್ನೂ ನೀಡದೆ ಇರುವುದು ನೌಕರರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಳಲು ತೋಡಿಕೊಂಡರು.

ವೇತನವನ್ನು ಪ್ರತಿ ತಿಂಗಳು ನೌಕರರ ಕೈಗೆ ನೀಡಲಾಗುತ್ತಿದೆ. ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿಲ್ಲ. ನೌಕರರಿಗೆ ಸಾಮಾಜಿಕ ಭದ್ರತಾ ಕ್ರಮವಾಗಿ ಪ್ರತಿ ತಿಂಗಳು ಭವಿಷ್ಯ ನಿಧಿ ಸಂದಾಯ ಆಗುತ್ತಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಈ ಬಗ್ಗೆ ನೌಕರರಿಗೆ ಯಾವುದೇ ಮಾಹಿತಿಯನ್ನು ಹೊರಗುತ್ತಿಗೆ ಕಂಪೆನಿಗಳೂ ನೀಡಿಲ್ಲ ಎಂದು ದೂರಿದರು.

ನಿಗದಿತ ಕನಿಷ್ಠ ವೇತನ ರೂ.4158 ಅನ್ನು ನೌಕರರಿಗೆ ಸಂದಾಯ ಬ್ಯಾಂಕ್ ಖಾತೆಯ ಮೂಲಕ ಸಂದಾಯ ಮಾಡಬೇಕು. ಭವಿಷ್ಯ ನಿಧಿ ಹಣವನ್ನು ನೌಕರರ ಖಾತೆಗೆ ಸಂದಾಯ ಮಾಡಿ, ಅದರ ಮಾಹಿತಿಯನ್ನು ನೌಕರರಿಗೆ ಒದಗಿಸಬೇಕು. ಇದುವರೆಗೂ ನೌಕರರಿಗೆ ಕಡಿತವಾಗಿರುವ ಎಲ್ಲ ವೇತನವನ್ನು ಸಂಬಂಧಪಟ್ಟ ಏಜೆನ್ಸಿಯಿಂದ ಬಾಕಿ ರೂಪದಲ್ಲಿ ಕೊಡಿಸಲು ಕ್ರಮ ಕೈಗೊಳ್ಳಬೇಕು.

  ಶಹಾಪುರ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನೌಕರರಿಗೆ 5 ತಿಂಗಳ ಬಾಕಿ ವೇತನವನ್ನು ಕೂಡಲೇ ಪಾವತಿಸಲು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು. ಸಂಘದ ಜಿಲ್ಲಾ ಸಂಚಾಲಕ ಸಂತೋಷಕುಮಾರ ಹಿರವೆ, ರಾಜ್ಯ ಘಟಕದ ಅಧ್ಯಕ್ಷ ಎನ್.ಎಸ್. ವಿರೇಶ, ಭೀಮರಾಯ, ಕಾವೇರಿ, ನಾಗಮ್ಮ ಸೇರಿದಂತೆ ಹಲವಾರು ನೌಕರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT