ಮಧುಗಿರಿ: ಗ್ರಾಮೀಣ ಪ್ರದೇಶದ ಕನ್ನಡಿಗರ ಬಾಯಿಂದ ಕನ್ನಡ ಕಳಚಿ ಹೋಗುವ ಮುನ್ನ ಎಚ್ಚೆತ್ತು ಉಳಿಸಿ ಬೆಳೆಸಬೇಕಾಗಿದೆ ಎಂದು ಹಿರಿಯ ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಕರೆ ನೀಡಿದರು.ಪಟ್ಟಣದ ಮಾಲಿ ಮರಿಯಪ್ಪ ರಂಗಮಂದಿರದಲ್ಲಿ ಕಲಾತಪಸ್ವಿ ಎಂ.ಎಸ್.ನಂಜುಂಡರಾವ್ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ಭರತ ಖಂಡದ 15 ಭಾಷೆಗಳಲ್ಲಿ ಪ್ರಾಚೀನ ಭಾಷೆಯಾದ ಕನ್ನಡ, ಕಾವ್ಯ ಹಾಗೂ ಸಂಸ್ಕೃತಿಯಲ್ಲಿಯೂ ಎಲ್ಲಾ ಭಾಷೆಯನ್ನು ಹಿಮ್ಮೆಟ್ಟಿಸಿದೆ ಎಂದರು.
ನಿಜವಾದ ಕನ್ನಡ ಪ್ರೇಮ ಮನೆಯಿಂದ ಪ್ರಾರಂಭವಾಗಬೇಕು. ಅನ್ಯ ಭಾಷಿಕರನ್ನು ಧಿಕ್ಕರಿಸದೆ ರಾಷ್ಟ್ರೀಯತೆ ಉಳಿಸಿ ಉತ್ತಮ ಕನ್ನಡಿಗರಾಗಬೇಕು ಎಂದರು. ಸಮ್ಮೇಳನಾಧ್ಯಕ್ಷ ಪ್ರೊ. ಮ.ಲ.ನ ಮೂರ್ತಿ, ತಹಶೀಲ್ದಾರ್ ಆರ್.ನಾಗರಾಜಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ನೇ.ಭ.ರಾಮಲಿಂಗಶೆಟ್ಟಿ. ರಾಜ್ಯ.ಕಸಾಪ ಕಾರ್ಯದರ್ಶಿ ಪ್ರೊ.ಮಳಲಿಗೌಡ, ಕೋಶಾಧ್ಯಕ್ಷ ಪುಂಡಲೀಕಹಾಲಂಬಿ, ಬಿಜೆಪಿ ಮುಖಂಡ ಬಾಲೇನಹಳ್ಳಿ ಶಿವಣ್ಣ, ಚಲನಚಿತ್ರ ನಿರ್ಮಾಪಕ ಮುರಳೀಧರ ಹಾಲಪ್ಪ, ಪುರಸಭಾಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯ ಎಂ.ಎಲ್.ಗಂಗರಾಜು ಮಾತನಾಡಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಾದೇಶಿಕ ನಿರ್ದೇಶಕ ಎಸ್.ವಿ.ವೆಂಕಟೇಶಯ್ಯ, ಮುಖಂಡರಾದ ಕೆ.ಎಸ್.ಪಾಂಡುರಂಗರೆಡ್ಡಿ, ಡಾ.ಜಿ.ಕೆ.ಜಯರಾಮ್, ಪಿ.ಸಿ.ಕೃಷ್ಣಾರೆಡ್ಡಿ, ತಾಲ್ಲೂಕು ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಮೋಹನ್, ಕನ್ನಡಸೇನೆ ಅಧ್ಯಕ್ಷ ಭಾಸ್ಕರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಸಮ್ಮೇಳನಾಧ್ಯಕ್ಷ ಪ್ರೊ. ಮ.ಲ.ನ ಮೂರ್ತಿ, ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್, ನೇ.ಭ.ರಾಮಲಿಂಗಶೆಟ್ಟಿ. ಬಾಲೇನಹಳ್ಳಿ ಶಿವಣ್ಣ, ಪುರಸಭಾಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯ ಎಂ.ಎಲ್.ಗಂಗರಾಜು, ನಿರ್ಮಾಪಕ ಮುರಳೀಧರ ಹಾಲಪ್ಪ, ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರು ಹಾಗೂ ಸಮ್ಮೇಳನದ ಯಶಸ್ಸಿಗೆ ಪ್ರತ್ಯಕ್ಷವಾಗಿ ಸಹಕರಿಸಿದ ಮಹನೀಯರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಸಮರೋಪದ ನಂತರ ಬೆಂಗಳೂರು ಪ್ರಭಾತ್ ಕಲಾವಿದರು ತಂಡದಿಂದ ಕರ್ನಾಟಕ ವೈಭವ ನೃತ್ಯ ರೂಪಕ ಪ್ರದರ್ಶಿಸಿದರು. ರಂಗನಾಥ್ ಸ್ವಾಗತಿಸಿದರು. ಮಂಜುಳಾನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.